
ಚಂದಾಪುರ (ಆನೇಕಲ್): ಚಂದಾಪುರ ಪುರಸಭೆ ವ್ಯಾಪ್ತಿಯ ಹೀಲಲಿಗೆ ಗ್ರಾಮದ ಮುಖ್ಯರಸ್ತೆ ಕಾಮಗಾರಿಗೆ ಶಾಸಕ ಬಿ.ಶಿವಣ್ಣ ಮತ್ತು ಚಂದಾಪುರ ಪುರಸಭೆ ಅಧ್ಯಕ್ಷೆ ಶಾರದ ವರದರಾಜು ಬುಧವಾರ ಭೂಮಿಪೂಜೆ ನೆರವೇರಿಸಿದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಹೀಲಲಿಗೆ ಮುಖ್ಯ ರಸ್ತೆಯು ಹುಸ್ಕೂರು ಮದ್ದೂರಮ್ಮ ದೇವಾಲಯದ ರಸ್ತೆಯಾಗಿದೆ. ಕೆಲವೇ ದಿನಗಳಲ್ಲಿ ಮದ್ದೂರಮ್ಮ ಜಾತ್ರೆ ನಡೆಯಲಿದೆ. ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಮುಖ್ಯರಸ್ತೆಗಳ ಡಾಂಬರೀಕರಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ಹಂತ ಹಂತವಾಗಿ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ. ಚಂದಾಪುರ-ಆನೇಕಲ್ ಮುಖ್ಯ ರಸ್ತೆಯ ಕಾಮಗಾರಿ ಶೇ 85ರಷ್ಟು ಮುಗಿದಿದೆ. ಉಳಿದ ಕಾಮಗಾರಿಗೆ ವೇಗ ನೀಡುವಂತೆ ಸೂಚಿಸಲಾಗಿದೆ. ಚಂದಾಪುರ-ದೊಮ್ಮಸಂದ್ರ, ಸಿಂಗೇನ ಅಗ್ರಹಾರ ರಸ್ತೆಗಳ ಡಾಂಬರೀಕರಣ ಕಾರ್ಯಕ್ಕೂ ವೇಗ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಚಂದಾಪುರ ಪುರಸಭೆ ಅಧ್ಯಕ್ಷೆ ಶಾರದ ವರದರಾಜು ಮಾತನಾಡಿ, ಮುಖ್ಯರಸ್ತೆ ಹದಗೆಟ್ಟಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಹೀಲಲಿಗೆ ಮುಖ್ಯರಸ್ತೆ ಅಭಿವೃದ್ಧಿಗೊಳ್ಳುವುದರಿಂದ ಚಂದಾಪುರದಲ್ಲಿನ ವಾಹನಗಳ ಒತ್ತಡ ಕಡಿಮೆಯಾಗುತ್ತದೆ. ಚಂದಾಪುರ ಪೊಲೀಸರು ರಸ್ತೆ ದಟ್ಟಣೆ ಬಗ್ಗೆ ನಿಗಾವಹಿಸುವ ಅವಶ್ಯಕತೆ ಇದೆ ಎಂದರು.
ಪುರಸಭೆ ಉಪಾಧ್ಯಕ್ಷೆ ಮಂಜುಳ, ಕೃಷ್ಣಾರೆಡ್ಡಿ, ಸುಕನ್ಯಾ ವೇಣುಗೋಪಾಲ್, ಉಮೇಶ್, ರಮೇಶ್, ಶಿವಮ್ಮ, ರಮೇಶ್, ಪ್ರಕಾಶ್, ಲೋಕೇಶ್, ಮಂಜುನಾಥರೆಡ್ಡಿ, ಗೋಪಾಲರೆಡ್ಡಿ, ಡೈರಿ ಚಂದ್ರಾರೆಡ್ಡಿ, ಮಂಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.