ದೊಡ್ಡಬಳ್ಳಾಪುರ: ತಾಲ್ಲೂಕಿನ ತಪಸೀಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ವತಿಯಿಂದ ಪ್ರಾರಂಭಿಸಲಾಗುತ್ತಿರುವ ಗುರುಕುಲ ಪದ್ಧತಿ ಶಿಕ್ಷಣದ ಜತೆಗೆ ಆಧುನಿಕ ಸೌಲಭ್ಯ ಒಳಗೊಂಡ ಶಿಕ್ಷಣ ನೀಡುವ ಎನ್ನುವ ಉದ್ದೇಶದಿಂದ ಪೂರ್ವ ಪ್ರಾಥಮಿಕ ಹಂತ ಹಾಗೂ ಪಿಯು ಕಾಲೇಜು ಶಿಕ್ಷಣವನ್ನು 2019ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ ಎಂದು ಆಶ್ರಮದ ಪೀಠಾಧ್ಯಕ್ಷ ದಿವ್ಯಜ್ಞಾನಾನಂದ ಗಿರಿ ಸ್ವಾಮೀಜಿ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, ಗುರುಕುಲದ ಎರಡನೇ ವರ್ಷದ ದಾಖಲಾತಿ ಆರಂಭಿಸಲಾಗಿದ್ದು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ. ಡಿಜಿಟಲ್ ಯುಗದ ಎಲ್ಲ ಸೌಲಭ್ಯ, ನುರಿತ ಶಿಕ್ಷಕರನ್ನೊಳಗೊಂಡ ಧ್ಯಾನ, ಯೋಗ, ಪರಿಸರ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ಸುಶಿಕ್ಷಿತರನ್ನಾಗಿಸಲು ಶ್ರಮಿಸಲಾಗುವುದು ಎಂದರು.
ಓದಿನಲ್ಲಿ ಹಿಂದುಳಿದ ಗ್ರಾಮೀಣ ಭಾಗದ ರೈತರು, ನೇಕಾರರು, ಕೂಲಿ– ಕಾರ್ಮಿಕರ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕೆಂಬ ಧ್ಯೇಯ ಇದೆ ಎಂದು ತಿಳಿಸಿದರು.
ಕಲಿಕೆ ಹಂತದಿಂದಲೇ ಮಕ್ಕಳಿಗೆ ಪ್ರಕೃತಿಯಲ್ಲಿ ಗಿಡ, ಮರ, ಪ್ರಾಣಿಗಳ ಚಲನವಲನಗಳ ಪರಿಚಯ ಮಾಡಿಕೊಡಲಾಗುವುದು. ಇದರಿಂದ ಪ್ರಕೃತಿಯೊಂದಿಗೆ ಮಕ್ಕಳಿಗೆ ಬಾಂಧ್ಯವ್ಯ ಬೆಳೆಯಲಿದೆ. ಸಂಸ್ಕೃತಿ, ಪರಂಪರೆ ಅರಿವನ್ನು ಕಲಿಕಾ ಹಂತದಿಂದಲೇ ತಿಳಿಸಿಕೊಡುವ ಗುರಿ ಈ ಶಿಕ್ಷಣ ಪದ್ಧತಿ ಹೊಂದಿದೆ ಎಂದು ತಿಳಿಸಿದರು.
ಮಾಹಿತಿಗೆ ದೂ: 9449988381
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.