ADVERTISEMENT

ಶಿಕ್ಷಕರ ಕೊರತೆ: ವಿದ್ಯಾಭ್ಯಾಸಕ್ಕೆ ಹಿನ್ನಡೆ

ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ: ಪೋಷಕರ ಆರೋಪ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 19:38 IST
Last Updated 5 ಆಗಸ್ಟ್ 2019, 19:38 IST
ಶಾಲೆ ಅಂಗಳದಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳು
ಶಾಲೆ ಅಂಗಳದಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳು   

ಹೆಸರಘಟ್ಟ: ದಾಸನಪುರ ಹೋಬಳಿ ಸಿದ್ದನಹೊಸಹಳ್ಳಿ ಗ್ರಾಮದಲ್ಲಿರುವ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಿನ್ನಡೆಯಾಗಿದೆ ಎಂದು ಪೋಷಕರು ದೂರಿದ್ದಾರೆ.

‘560 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗೆ ಮುಖ್ಯ ಶಿಕ್ಷಕರು ಇಲ್ಲದೇ ಎರಡು ವರ್ಷಗಳಾಗಿವೆ. ಎರಡು ಶಿಕ್ಷಕರ ಹುದ್ದೆ ಖಾಲಿ ಇವೆ. ಶಾಲೆಗೆ ಮೇಲ್ವಿ
ಚಾರಕರಾಗಿ ಒಬ್ಬ ಶಿಕ್ಷಕರನ್ನು ನೇಮಿಸಿದ್ದಾರೆ. ಅವರು ಇಲಾಖೆಯ ಸಭೆಗಳಿಗೆ ಹೋದರೆ ಇರುವ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಪಾಠ ಕಲಿಸಬೇಕಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ’ ಎಂದು ಪೋಷಕರು ದೂರಿದ್ದಾರೆ.

‘ಇಬ್ಬರು ಶಿಕ್ಷಕರು ಶಾಲೆಗೆ ರಜೆ ಹಾಕಿದರೆ, ಪಠ್ಯ ಬೋಧನೆ ನಡೆಯುವುದೇ ಇಲ್ಲ. ಆಟವಾಡಿ ಅಥವಾ ಗಿಡಗಳಿಗೆ ನೀರು ಹಾಕಿ ಮನೆಗೆ ಹಿಂದಿರುಗುತ್ತೇವೆ’ ಎಂದು ವಿದ್ಯಾರ್ಥಿಯೊಬ್ಬ ಅಳಲು ತೋಡಿಕೊಂಡ.

ADVERTISEMENT

‘ಶಾಲೆಗೆ ಬೇಕಾದ ಎಲ್ಲ ಸೌಲಭ್ಯವನ್ನು ದಾನಿಗಳ ಸಹಾಯದಿಂದ ಒದಗಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪಂಚಾಯ್ತಿಯಿಂದ ₹2 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಆದರೆ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಕ್ಷೀಣಿಸುತ್ತಿದೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೋಹನ್ ಕುಮಾರ್ ಹೇಳಿದರು.

‘ಬಹುತೇಕ ಕೂಲಿ ಕಾರ್ಮಿಕರ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ದುಡ್ಡು ಕೊಟ್ಟು ಮಕ್ಕಳನ್ನು ಓದಿಸುವ ಅನುಕೂಲಸ್ಥ ಕುಟುಂಬಗಳು ಇಲ್ಲಿ ವಿರಳ. ಸರ್ಕಾರಿ ಶಾಲೆಗಳಲ್ಲಿ ಇಂತಹ ಸ್ಥಿತಿ ಇದೆ’ ಎಂದುಗ್ರಾಮದ ನಿವಾಸಿ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಒಂದು ವಾರದೊಳಗೆ ಮುಖ್ಯ ಶಿಕ್ಷಕರನ್ನು ಮತ್ತು ಖಾಲಿ ಇರುವ ಎರಡು ಹುದ್ದೆಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗುವುದು
– ರಮೇಶ್‌ಕುಮಾರ್‌, ಬೆಂಗಳೂರು ಉತ್ತರ ವಲಯ 1 ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.