
ಹೊಸಕೋಟೆ: ಕೋಲಾರದ ಆದಿಮ ರಂಗಶಿಕ್ಷಣ ಕೇಂದ್ರದ ತರಬೇತಿ ವಿದ್ಯಾರ್ಥಿಗಳು ನಿಂಬೆಕಾಯಿಪುರದ ಜನಪದರು ರಂಗ ಮಂದಿರದಲ್ಲಿ ‘ಮಧ್ಯಮ ವ್ಯಾಯೋಗ’ ನಾಟಕ ಪ್ರದರ್ಶಿಸಿದರು.
ಜನಪದರು ಸಾಂಸ್ಕೃತಿಕ ವೇದಿಕೆ 101 ನೇ ರಂಗಮಾಲೆಯ ಪ್ರಯುಕ್ತ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಭಾಸನ ಸಂಸ್ಕೃತ ನಾಟಕವನ್ನು ಎಲ್. ಗುಂಡಪ್ಪ ಕನ್ನಡ ಅನುವಾದ ಮಾಡಿದ್ದಾರೆ. ಜಗದೀಶ ಆರ್. ಜಾಣೆ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕದಲ್ಲಿ ಯಕ್ಷಗಾನ, ಬಯಲಾಟ, ಕಳರಿಪಯಟ್ಟು ಮೊದಲಾದ ದೇಶಿ ಕಲೆಗಳು ಮನೋಜ್ಞವಾಗಿ ರಂಗದ ಮೇಲೆ ಮೂಡಿ ಬಂದವು.
ಭೀಮ ಮತ್ತು ಘಟೋದ್ಗಜ ತಂದೆ ಮಕ್ಕಳು ಎಂಬುದರ ಅರಿವಿಲ್ಲದೆಯೇ ಯುದ್ಧ ಮಾಡವುದು, ಅದರಲ್ಲಿ ಘಟೋದ್ಗಜ ಅಪಜಯ ಹೊಂದುವ, ಭೀಮ ಹಿಡಿಂಬಿಯರ ಭೇಟಿಯ ಪ್ರಸಂಗದ ಮಹಾಭಾರತದ ಕಥನವನ್ನು ತರಬೇತಿ ವಿದ್ಯಾರ್ಥಿಗಳು ಲೀಲಾಜಾಲವಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು.
ಜಗದೀಶ ಜಾಣೆ ಮತ್ತು ಶ್ರೀನಿವಾಸ್ ಸಂಗೀತ ಮತ್ತು ರವಿ ಬೆಳಕಿನ ವಿನ್ಯಾಸ, ರಾಮಕೃಷ್ಣ ಬೆಳತೂರು ವಸ್ತ್ರ ವಿನ್ಯಾಸ ನಾಟಕದ ಸೊಬಗನ್ನು ಹೆಚ್ಚಿಸಿದವು.
ಆದಿಮ ರಂಗ ಶಾಲೆಯ ಪ್ರಾಂಶುಪಾಲ, ನಾಟಕದ ನಿರ್ದೇಶಕ ಜಗದೀಶ್ ಆರ್. ಜಾಣೆ ಮಾತನಾಡಿ, ಹೊಸದಾಗಿ ರಂಗಶಿಕ್ಷಣಕ್ಕೆ ಪ್ರವೇಶಿಸಿರುವ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಜನಪದರು ರಂಗಮಂದಿರಲ್ಲಿ ಹೊಸ ಅನುಭವ ನೀಡಿದೆ ಎಂದರು.
ಜನಪದರು ಅಧ್ಯಕ್ಷ ಕಾಟಂನಲ್ಲೂರು ಪಾಪಣ್ಣ, ಕಾರ್ಯದರ್ಶಿ ಸಿದ್ಧೇಶ್ವರ ನನಸುಮನೆ, ಖಜಾಂಚಿ ಎಂ. ಸುರೇಶ್, ರಾಮಕೃಷ್ಣ ಬೆಳತೂರು, ಮಮತಾ, ಮುನಿರಾಜು ಬಿದರೇಅಗ್ರಹಾರ, ರಾಜಣ್ಣ ಕಾಟಂನಲ್ಲೂರು, ಶಿವಕುಮಾರ್ ಕಾಟಂ ನಲ್ಲೂರು, ಮಧುಸೂದನ್ ನಾಯಕ ಜಿ, ವೇಂಕಟಾಚಲಪತಿ, ಧನ್ಯ, ಶಿವಕುಮಾರ್ ತಾವರೇ ಕೆರೆ, ಮಹೇಶ್, ಕೃಷ್ಣ ಸುರೇಶ, ಜಿಬಿ ಚಂದ್ರೇಶೇಖರ್, ಬಾಗೆಪಲ್ಲಿ ಕೃಷ್ಣಮೂರ್ತಿ, ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.