ಹೊಸಕೋಟೆ: ಸುಮಾರು 13 ವರ್ಷಗಳ ಹಿಂದೆ ನಿಂತಿದ್ದ ಕೋಟೂರು ಗ್ರಾಮದ ಗ್ರಾಮ ದೇವತೆಗಳ ಊರಹಬ್ಬವನ್ನು ಬುಧವಾರ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ತಾಲ್ಲೂಕಿನ ಅನುಗೊಂಡಹಳ್ಳಿ ಹೋಬಳಿಯ ಮತ್ಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೂರಿನ ಬಸವೇಶ್ವರ, ವೇಣುಗೋಪಾಲ, ಆಂಜನೇಯ, ಓಂ ಶಕ್ತಿ ದೇವರಿಗೆ ಬೆಲ್ಲದ ದೀಪೋತ್ಸವ, ಅಣ್ಣೆಮ್ಮ ದೇವಿ, ಕಾವೇರಮ್ಮ, ಸಪಲಮ್ಮ, ಕಾಳಮ್ಮ, ಮಾರಮ್ಮ, ಮುನೇಶ್ವರ ಸ್ವಾಮಿ ದೇವರಿಗೆ ದೀಪೋತ್ಸವ, ಪಲ್ಲಕ್ಕಿಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಏಪ್ರಿಲ್ 1ರಿಂದ 3ರವರೆಗೆ ಮೂರು ದಿನಗಳ ಕಾಲ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು ಗ್ರಾಮ ದೇವತೆಗಳಾದ ಕಾಳಮ್ಮ, ಕಾವೇರಮ್ಮ ಹಾಗು ಮುನೇಶ್ವರ ದೇವರುಗಳಿಗೆ ದೀಪೋತ್ಸವದ ಆರತಿ ಬೆಳಗಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಪೂಜಪ್ಪ ಮಾತನಾಡಿ, ಈ ಗ್ರಾಮ ದೇವತೆಗಳ ಹಬ್ಬ ಕಳೆದ 13 ವರ್ಷಗಳಿಂದ ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಗ್ರಾಮಸ್ಥರೆಲ್ಲ ಒಗ್ಗಟ್ಟಾಗಿ, ಪಕ್ಷಾತೀತವಾಗಿ, ಜಾತ್ಯತೀತವಾಗಿ ಗ್ರಾಮಸ್ಥರೆಲ್ಲ ಒಟ್ಟು ಗೂಡಿ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮುತ್ಸಂದ್ರ ವಿಎಸ್ಎಸ್ಎನ್ ಅಧ್ಯಕ್ಷ ವಿಜಯೇಂದ್ರ ಬಾಬು, ವೇಣುಗೋಪಾಲ್, ಹಾರೋಹಳ್ಳಿ ಕೇಶವರೆಡ್ಡಿ, ಚಂದ್ರಾ ರೆಡ್ಡಿ, ಸೌಮ್ಯ ಹರೀಶ್, ಸುಮನ್, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.