
ಹೊಸಕೋಟೆ: ಮೈಸೂರು–ಬೆಂಗಳೂರು ಮಾದರಿಯಲ್ಲಿ ನಗರದಲ್ಲಿಯೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲ್ಲೂಕಿನ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಎಸ್ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉನ್ನತ ವ್ಯಾಸಂಗಕ್ಕಾಗಿ ಉಚಿತ ಆರ್ಥಿಕ ನೆರವು ಚೆಕ್ ವಿತರಣೆ ಕಾರ್ಯಕ್ರಮಲ್ಲಿ ಮಾತನಾಡಿದರು.
ನಗರದಲ್ಲಿ ಭೂಗತ ಕೇಬಲ್ ಕಾಮಗಾರಿ ನಡೆಯುತ್ತಿರುವುದರಿಂದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ರಾತ್ರಿ ಸಂಚಾರಕ್ಕೆ ತೊಂದರೆ ಆಗಿದೆ. ಹೀಗಾಗಿ ಕಾಮಗಾರಿ ಸಂಪೂರ್ಣಗೊಂಡ ಬಳಿಕ ₹5 ಕೋಟಿ ವೆಚ್ಚದಲ್ಲಿ ನಗರದಾದ್ಯಂತ ಸುಸಜ್ಜಿತ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
113 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಸೇವಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ, ₹350 ಕೋಟಿ ವ್ಯವಹಾರ ನಡೆಸಿರುವುದು ಹೆಮ್ಮೆ ವಿಚಾರ. ಅಲ್ಲದೆ ಬ್ಯಾಂಕ್ನಿಂದ ಪ್ರತಿಭಾವಂತ 291 ಮಕ್ಕಳನ್ನು ಗುರುತಿಸಿ ₹12 ಲಕ್ಷದಷ್ಟ ನೆರವು ನೀಡುತ್ತಿರುವುದು ಬ್ಯಾಂಕಿನ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ಅಧ್ಯಕ್ಷ ಬಲ್ಪ್ ಮಂಜಣ್ಣ, ಉಪಾಧ್ಯಕ್ಷ ಅಕ್ಬರ್ ಪಾಷಾ, ಬಿವಿ ಭೈರೇಗೌಡ, ಜನನಿ ಟ್ರಸ್ಟ್ ಸಂಸ್ಥಾಪಕ ಸಿ. ಜಯರಾಜ್, ಸುಬ್ಬರಾಜು, ಕೇಶವಮೂರ್ತಿ, ವಿಜಯ್ ಕುಮಾರ್, ಎಚ್.ಎ. ಕೃಷ್ಣಪ್ಪ, ಬ್ಯಾಂಕ್ ನಿರ್ದೇಶಕ ನಾಗರಾಜ್, ಕೆ.ಕಿರಣ್, ಕೆ.ಕಿರಣ್ ಕುಮಾರ್, ಬಿ.ನಾಗರಾಜ್, ವಿಷ್ಣು, ಎಸ್.ಮುರಳಿ, ವೆಂಕಟಲಕ್ಷ್ಮಿ ಇದ್ದರು.
ಬ್ಯಾಂಕ್ ವತಿಯಿಂದ ಮುಂದಿನ ದಿನಗಳಲ್ಲಿ ವರ್ಷಕ್ಕೊಂದು ಕಾರ್ಯಕ್ರಮ ಮಾಡುವ ಬದಲಿಗೆ ಪಿಯುಸಿ ಮಕ್ಕಳಿಗೆ ಅನುಕೂಲವಾಗುವಂತೆ ನೀಟ್ ಸಿಇಟಿ ತರಬೇತಿ ಕೋರ್ಸ್ ಆರಂಭಿಸಲಾಗುವುದುಬಲ್ಪ್ ಮಂಜಣ್ಣ ಅಧ್ಯಕ್ಷ ದಿ ಟೌನ್ ಕೊ ಆಪರೇಟಿವ್ ಬ್ಯಾಂಕ್
ಹೊಸಕೋಟೆಗೆ ಕಾವೇರಿ ನಗರಕ್ಕೆ 124 ಕೊಳವೆ ಬಾವಿಗಳ ಮೂಲಕ ಸಂಗ್ರಹಿಸುವ ನೀರೆ ಆಧಾರ. ಆದ್ದರಿಂದ ಭಟ್ಟರಹಳ್ಳಿವರೆಗೂ ಬಂದಿರುವ ಕಾವೇರಿ ನೀರನ್ನು ಹೊಸಕೋಟೆ ನಗರಕ್ಕೂ ತರಲು ಸಂಬಂದಪಟ್ಟ ಸಚಿವರ ಜೊತೆ ಚರ್ಚಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.