ಹೊಸಕೋಟೆ: ತಾಲ್ಲೂಕಿನ ಕಸಬಾ ಹೋಬಳಿ ಪಿಲ್ಲಗುಂಪೆ ಗ್ರಾಮದ ಸರ್ಕಾರಿ ಖರಾಬ್ ಜಮೀನಿನಲ್ಲಿ ಸುಮಾರು 50 ವರ್ಷಗಳಿಂದ ವಾಸವಿರುವ 20 ದಲಿತ ಕುಟುಂಬಗಳನ್ನು ಬಲಾಢ್ಯರು ಒಕ್ಕಲೆಬ್ಬಿಸಲು ಮುಂದಾಗಿದ್ದು, ಇದರ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಭೀಮ್ ಸೇನಾ ಸಮಿತಿ ಎಚ್ಚರಿಕೆ ನೀಡಿದೆ.
ಭೀಮ್ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ರಾವಣ್ ಮಾತನಾಡಿ, ‘ಬಡ ದಲಿತ ಕುಟುಂಬಗಳಿಗೆ ಆಗುತ್ತಿರುವ ಅನ್ಯಾಯ ಸಹಿಸಲಾಗದು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಅದೇ ಗ್ರಾಮದ ಮೇಲ್ವರ್ಗದ ರಾಜಕೀಯವಾಗಿ ಬಲಿಷ್ಟವಾದ ವ್ಯಕ್ತಿ ತನ್ನ ಮಗನ ಆಸ್ಪತ್ರೆ ನಿರ್ಮಿಸಲು ದಲಿತರು ವಾಸ ಮಾಡುತ್ತಿರುವ ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡಿ ಕೊಲೆ ಬೆದರಿಕೆ ಹಾಕುತ್ತಿರುವುದು ಖಂಡನೀಯ’ ಎಂದರು.
‘ಘಟನೆ ನಮ್ಮ ಗಮನಕ್ಕೆ ಬಂದ ತಕ್ಷಣ ನಮ್ಮ ತಂಡವು ಗ್ರಾಮಕ್ಕೆ ಭೇಟಿ ದಲಿತ ಕುಟುಂಬಗಳಿಗೆ ಧೈರ್ಯ ತುಂಬಿದ್ದೇವೆ. ದಲಿತರಿಗೆ ಬೆದರಿಕೆ ಹಾಕುತ್ತಿರುವ ವ್ಯಕ್ತಿ ಗ್ರಾಮಸ್ಥರಿಗೆ ನೀಡುತ್ತಿರುವ ಕಿರುಕುಳ ಮತ್ತು ತೊಂದರೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ದಲಿತರಿಗೆ ಆಗುತ್ತಿರುವ ಅನ್ಯಾಯವ ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸಬೇಕು. ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ರೂಪಿಸಲಾಗುವುದು’ ಎಂದರು.
ಜಿಲ್ಲಾ ಚಾಲಕರ ಘಟಕದ ಅಧ್ಯಕ್ಷ ಮುನಿರಾಜ, ಆಟೊ ಘಟಕದ ಅಧ್ಯಕ್ಷ ಶ್ರೀನಾಥ್, ಕಾರ್ಮಿಕ ಘಟಕದ ಹೊಸಕೋಟೆ ತಾಲ್ಲೂಕು ಅಧ್ಯಕ್ಷ ವರುಣ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.