
ಹೊಸಕೋಟೆ: ತಾಲ್ಲೂಕು ಕಚೇರಿಯಲ್ಲಿ ದಲಿತರು, ಬಡವರಿಗೆ ನ್ಯಾಯ ಸಿಗುತ್ತಿಲ್ಲ. ಬದಲಾಗಿ ಹಣವಂತರಿಗೆ ಬಲಾಡ್ಯರಿಗೆ ಹಾಗೂ ಶಾಸಕ ಬೆಂಬಲಿಗರ ಕೆಲಸಗಳು ಮಾತ್ರ ಸುಲಲಿತವಾಗಿ ನಡೆಯುತ್ತಿದೆ ಎಂದು ಆರೋಪಿಸಿ, ತಹಶೀಲ್ದಾರ್ ವಿರುದ್ಧ ಅಂಬೇಡ್ಕರ್ ಸೇವಾ ಸಮಿತಿ ಪ್ರತಿಭಟನೆ ನಡೆಸಿದೆ.
ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಜಮಾಯಿಸಿದ ಸಮಿತಿ ಪದಾಧಿಕಾರಿಗಳು ತಾಲ್ಲೂಕು ಆಡಳಿತದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಾದ್ಯಂತ ದಲಿತರಿಗೆ ಸಂಬಂದಪಟ್ಟಂತೆ ಗುಟ್ಟಹಳ್ಳಿ, ಅರೇಹಳ್ಳಿ, ದೊಡ್ಡರಾಮನಹಳ್ಳಿ, ಅತ್ತಿಬೆಲೆ, ತಿರುಮಲಶೆಟ್ಟಿಹಳ್ಳಿ ಸೇರಿದಂತೆ ಸುಮಾರು 12 ರಿಂದ 14 ಜಮೀನು ಪ್ರಕರಣಗಳು ಇಂದಿಗೂ ಇತ್ಯರ್ಥ ಆಗಿಲ್ಲ. ತಹಶೀಲ್ದಾರ್ ಕಾಳಜಿ ವಹಿಸಿ ದಾಖಲೆಗಳನ್ನು ಪರಿಶೀಲಿಸಿದ್ದರೆ ಸರ್ಕಾರಿ ಕರಾಬು ಜಮೀನುಗಳು ರೈತರಿಗೆ ದೊರೆಯುತ್ತಿದ್ದವು. ಆದರೆ ತಹಶಿಲ್ದಾರ್ ದಲಿತರಿಗೆ ಅನ್ಯಾಯ ಮಾಡಿ ಹಣವಂತರಿಗೆ ಹಾಗೂ ಬಲಾಡ್ಯರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಸಮಿತಿ ಅಧ್ಯಕ್ಷ ಸಂದೇಶ್ ಆರೋಪಿಸಿದರು.
ಇನ್ನೂ 15 ದಿನದೊಳಗೆ ದಲಿತ ಸಮುದಾಯಗಳ ಜಮೀನು ಪ್ರಕರಣಗಳನ್ನು ನ್ಯಾಯ ಕೊಡಸದಿದ್ದರೆ 16ನೇ ದಿನದಲ್ಲೇ ತಾಲ್ಲೂಕು ಕಚೇರಿ ಆವರಣ ತುಂಬುವಷ್ಟು ಜನರನ್ನು ಕರೆತಂದು ತಮಟೆ ಪ್ರತಿಭಟನೆ ನಡಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಿತಿ ತಾಲ್ಲೂಕು ಅದ್ಯಕ್ಷ ಮುತ್ಕೂರು ನಾರಾಯಣಪ್ಪ, ಉಪಾದ್ಯಕ್ಷ ಗೋವಿಂದರಾಜು, ಪ್ರದಾನ ಕಾರ್ಯದರ್ಶಿ ಪ್ರಕಾಶ್, ರಾಮು, ಕೃಷ್ಣಪ್ಪ, ನಾಗರಾಜು, ಸಂಚಾಲಕ ನಾಗೇಶ್ ಬೈಪನಹಳ್ಳಿ ಆಂಜಿನಪ್ಪ, ವೆಂಕಟೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.