ದೊಡ್ಡಬಳ್ಳಾಪುರ: ಇಲ್ಲಿನ ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ಮಹಾರಥೋತ್ಸವ ರಥಸಪ್ತಮಿ ದಿನವಾದ ಶನಿವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ತಾಲ್ಲೂಕಿನ ಭಕ್ತಾದಿಗಳು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಜನ ಭಾಗವಹಿಸಿ, ರಥಕ್ಕೆ ಹಣ್ಣು ಧವನ ಅರ್ಪಿಸಿದರು.
ಹುಲುಕುಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇಗುಲಕ್ಕೂ ಸಹಸ್ರಾರು ಜನ ಭಕ್ತಾದಿಗಳು ಭೇಟಿ ನೀಡಿ ದರ್ಶನ ಪಡೆದರು. ದೇವಾಲಯದಲ್ಲಿ ರಥಾಂಗ ಹೋಮ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಾ ರಥೋತ್ಸವದಲ್ಲಿ ಭಾಗವಹಿಸಿದ್ದ ವೀರಗಾಸೆ ಕುಣಿತ ಹಾಗೂ ಡೊಳ್ಳು ಕುಣಿತ, ಅಕ್ಕಿ ಪೂಜೆ, ದೀಪಾರಾಧನೆ ಮೆರುಗು ನೀಡಿದವು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ಹುಲುಕುಡಿ ಕ್ಷೇತ್ರ ತನ್ನದೇ ಆದ ಪುರಾಣ ಇತಿಹಾಸ ಹೊಂದಿದ್ದು, ವಿಶಿಷ್ಟವಾಗಿದೆ. ತಾಲ್ಲೂಕಿನ ಘಾಟಿ ಹಾಗೂ ಕನಸವಾಡಿಯಂತೆ ಅಭಿವೃದ್ಧಿ ಹೊಂದುತ್ತಿದೆ. ಭಕ್ತಾದಿಗಳು ಕ್ಷೇತ್ರದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸುವ ಮೂಲಕ ಕ್ಷೇತ್ರದ ಪ್ರಗತಿಗೆ ಎಲ್ಲರು ಸಹಕರಿಸಬೇಕು’ ಎಂದು ಹೇಳಿದರು.
ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಆರ್.ಡಿ.ನರಸಿಂಹಯ್ಯ, ಕಾರ್ಯದರ್ಶಿ ಸಿದ್ದಲಿಂಗಯ್ಯ, ಟ್ರಸ್ಟಿಗಳಾದ ಬಿ.ಎಸ್.ಚೆನ್ನೇಗೌಡ, ಆನಂದ್, ಸಿದ್ದಲಿಂಗಪ್ಪ, ಮಾರೇಗೌಡ ಭಾಗವಹಿಸಿದ್ದರು.
ಶಾಸಕ ಟಿ.ವೆಂಕಟರಮಣಯ್ಯ ಸಹೋದರರು ಹಾಗೂ ಸೀಗೇಪಾಳ್ಯ ಬಸವರಾಜ್, ವೀರಣ್ಣ, ಕಾಂತರಾಜ್, ಬಸವರಾಜಯ್ಯ ಅವರ ವತಿಯಿಂದ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.