ದೊಡ್ಡಬಳ್ಳಾಪುರ: ರೈತರಿಂದ ಖರೀದಿ ಮಾಡುವ ಹಾಲಿನ ದರ ಏರಿಕೆ ಮತ್ತು ಪ್ರೋತ್ಸಾಹ ಧನ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿ ಮುಂದೆ ಫೆ.10ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಿದೆ ಎಂದು ರಾಜ್ಯ ರೈತ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಪ್ರಸನ್ನ ತಿಳಿಸಿದರು.
ಸರ್ಕಾರ ರೈತರ ಉತ್ಪಾದನೆ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳದೆ ಬೆಲೆ ನಿಗದಿ ಮಾಡುತ್ತಿದೆ. ರೈತರಿಗೆ ಅನುಕೂಲ ಮಾಡುವುದು ಕೆಎಂಎಫ್ ಧ್ಯೇಯವಾಗಬೇಕು. ಆದರೆ ಸರ್ಕಾರಗಳು ರಾಜಕೀಯವಾಗಿ ಕೆಎಂಎಫ್ ಅನ್ನು ಬಳಸಿಕೊಳ್ಳುತ್ತಿವೆ. ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬೆಲೆ ಏರಿಕೆ ಮಾಡಬೇಕು. ಸರ್ಕಾರವೇ ರಚಿಸಿರುವ ಸಮಿತಿ ನೀಡಿರುವ ವರದಿ ಪ್ರಕಾರವೆ ರೈತರ ಅನುಕೂಲಕ್ಕಾಗಿ ಬೆಲೆ ಏರಿಕೆ ಮಾಡಲೇಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಕೆಎಂಎಫ್ ರೈತರಿಂದ ಹಾಲಿನ ಗುಣಮಟ್ಟವನ್ನು ಕೇಳುವುದಕ್ಕೆ ಮಾತ್ರ ಸೀಮಿತವಾಗಿದೆ. ಪಶು ಆಹಾರದಲ್ಲಿ ಮೋಸ ಆಗುತ್ತಿದೆ. ಅಲ್ಲದೆ ರೈತರಿಂದ ನೇರವಾಗಿ ಜೋಳ ಖರೀದಿ ಮಾಡುತ್ತಿಲ್ಲ. ದಲ್ಲಾಳಿಗಳಿಂದ ಖರೀದಿ ಮಾಡಿ ದರದಲ್ಲಿ ವ್ಯತ್ಯಾಸ ಮಾಡಿ ಮೋಸ ಮಾಡಲಾಗುತ್ತಿದೆ. ಹಾಲಿನ ಬೆಲೆ ಏರಿಕೆ ಮಾಡುತ್ತಿಲ್ಲ. ಬದಲಾಗಿ ನಂದಿನಿ ಉಪಉತ್ಪನ್ನಗಳ ಬೆಲೆ ಏರಿಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಇಚ್ಚಾಶಕ್ತಿ ಇಲ್ಲ ಎಂದು ರಾಜ್ಯ ರೈತ ಸಂಘದ ರಾಮನಗರ ಜಿಲ್ಲಾ ಅಧ್ಯಕ್ಷ ಭೈರೇಗೌಡ ದೂರಿದರು.
ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾ ಅಧ್ಯಕ್ಷ ಧನಂಜಯ ಆರಾಧ್ಯ, ಚಿಕ್ಕಬಳ್ಳಾಪುರ ಅಧ್ಯಕ್ಷ ಗೋಪಿನಾಥ, ಬೆಂಗಳೂರು ಪೂರ್ವ ಅಧ್ಯಕ್ಷ ಪ್ರಭು,ಮುಖಂಡರಾದ ಕೆ.ಸುಲೋಚನಮ್ಮ, ಆರ್.ಎಸ್.ಸತೀಶ್, ಮುತ್ತೇಗೌಡ, ಸತೀಶ್,ಶಿವರಾಜ್, ಶಿರವಾರರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.