ADVERTISEMENT

ಜಗಜೀವನ್ ರಾಂ ಪುತ್ಥಳಿ ಭಗ್ನ: ಬಂಧನಕ್ಕೆ ಒತ್ತಾಯ 

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 14:26 IST
Last Updated 31 ಆಗಸ್ಟ್ 2018, 14:26 IST
ಬಾಬು ಜಗಜೀವನ್ ರಾಂ ಪುತ್ಥಳಿ ಭಗ್ನ ವಿರೋಧಿಸಿ ಪಿವಿಬಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು 
ಬಾಬು ಜಗಜೀವನ್ ರಾಂ ಪುತ್ಥಳಿ ಭಗ್ನ ವಿರೋಧಿಸಿ ಪಿವಿಬಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು    

ದೇವನಹಳ್ಳಿ: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಹುಳಿಮಾವು ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಂ ಅವರ ಪುತ್ಥಳಿ ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿಕಾರ್ಯಕರ್ತರು ಒತ್ತಾಯಿಸಿದರು.

ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿಜ್ಜವಾರ ನಾಗರಾಜ್ ಮಾತನಾಡಿ, ಅಂಬೇಡ್ಕರ್ ಹಾಗೂ ಜಗಜೀವನ್ ರಾಂ ಅವರು ಶೋಷಿತ ವರ್ಗದ ಎರಡು ಕಣ್ಣುಗಳಿದ್ದಂತೆ. ‌ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಮಂತ್ರಿ ಹುದ್ದೆ ನಿಭಾಯಿಸಿದ ಬಾಬು ಜಗಜೀವನ್ ರಾಂ ಪುತ್ಥಳಿ ಧ್ವಂಸಗೊಳಿರುವುದು ದೇಶದ ದಲಿತರಿಗೆ ಅವಮಾನ ಮತ್ತು ನೋವುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಇಬ್ಬರು ಮಹನೀಯರ ಹೆಸರು ಹೇಳಿಕೊಂಡು ಅಧಿಕಾರದ ಗದ್ದುಗೆ ಏರಿರುವ ದಲಿತ ಸಮುದಾಯದ ಶಾಸಕರು, ಸಚಿವರು ಘಟನೆ ನಡೆದು ಎರಡು ದಿನ ಕಳೆದರೂ ಚಕಾರ ಎತ್ತಿಲ್ಲ. ದಲಿತ ನಾಯಕರಿಗಿಂತ ಸಚಿವ ಸ್ಥಾನ ಮತ್ತು ಶಾಸಕ ಸ್ಥಾನಮಾನ ಮುಖ್ಯವಾಗಿದೆ ಎಂದು ಆರೋಪಿಸಿದರು.

ADVERTISEMENT

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ನಿರಂತರವಾಗುತ್ತಿದೆ. ಸಂವಿಧಾನದ ಕರಡು ಪ್ರತಿಯನ್ನೆ ಬೆಂಕಿಹಚ್ಚಿ ಸುಡುತ್ತಿರುವುದು ಮಾನವತವಾದಿ ಅಂಬೇಡ್ಕರ್‌ಗೆ ಮಾಡಿದ ಅವಮಾನ. ಬಹುತೇಕ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತ ದೌರ್ಜನ್ಯದ ಪ್ರಕರಣ ಹೆಚ್ಚುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ದಲಿತರ ರಕ್ಷಣೆಗೆ ಮುಂದಾಗದಿದ್ದರೆ ಮುಂದೊಂದು ದಿನ ಸಾಮೂಹಿಕವಾಗಿ ದಲಿತರು ಸರ್ಕಾರದ ವಿರುದ್ಧ ಸಿಡಿದೇಳಬೇಕಾದಿತು ಎಂದು ಎಚ್ಚರಿಸಿದರು.

ಸಮಿತಿ ರಾಜ್ಯ ಘಟಕ ಉಪಾಧ್ಯಕ್ಷ ಸಿಂಗ್ರಹಳ್ಳಿ ನರಸಿಂಹಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಬಾಲ್ ರಾಜ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂತೋಷ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಸೋಲೂರು ನಾಗರಾಜ್, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಮಧು, ಮಹಿಳಾ ಘಟಕದ ಅಧ್ಯಕ್ಷೆ ಅನುಪಮಾ, ಕಾರ್ಯದರ್ಶಿ ಸುರೇಶ್, ಗೌರವಾಧ್ಯಕ್ಷ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.