
ವಿಜಯಪುರ ಪುರಸಭೆ ಆವರಣದಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತ ಸಾದತ್ ಪಾಷಾ ಮೇಲೆ ಪುರಸಭೆ ಸದಸ್ಯ ಹನೀಫುಲ್ಲಾ ಅವರ ತಮ್ಮ ಹಮೀದ್ ಹಲ್ಲೆ ನಡೆಸಿರುವುದು
ವಿಜಯಪುರ (ದೇವನಹಳ್ಳಿ): ಇಲ್ಲಿನ ಪುರಸಭೆ ಆವರಣದಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತ ಸಾದತ್ ಪಾಷಾ ಮೇಲೆ ಪುರಸಭೆ ಸದಸ್ಯ ಹನೀಫುಲ್ಲಾ ಅವರ ತಮ್ಮ ಹಮೀದ್ ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಪುರಸಭೆ ಸದಸ್ಯ ಹನೀಪುಲ್ಲಾ ಮತ್ತು ತಮ್ಮ ಹಮೀದ್ ಪುರಸಭೆ ಆವರಣದಲ್ಲಿ ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿ, ಅವ್ಯಾಚ ಶಬ್ಧಗಳಿಂದ ನಿಂದಿಸಿದರು' ಎಂದು ಹಲ್ಲೆಗೊಳಗಾದ ಜೆಡಿಎಸ್ ಕಾರ್ಯಕರ್ತ ಸಾದತ್ ಪಾಷಾ ಆರೋಪಿಸಿದರು.
‘ಅಲ್ಲದೆ ನನ್ನ ಬಟ್ಟೆ ಹರಿದು ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದರು. ಅಷ್ಟರಲ್ಲಿ ಸ್ಥಳೀಯರು ಪ್ರಾಣ ರಕ್ಷಣೆ ಮಾಡಿ ಸರ್ಕಾರಿ ಆಸ್ಪತ್ರೆಗೆ ಕರೆದ್ಯೊಯ್ದರು. ಸದಸ್ಯ ಹನೀಫುಲ್ಲಾ ಮತ್ತು ತಮ್ಮ ಹಮೀದ್ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಸಾದತ್ ಪಾಷಾಗೆ ನಾವು ಯಾವುದೇ ರೀತಿ ತೊಂದರೆ ನೀಡಿಲ್ಲ. ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿಲ್ಲ. ಅವರು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ’ ಎಂದು ಪುರಸಭೆ ಸದಸ್ಯ ಹನೀಫುಲ್ಲಾ ತಿಳಿಸಿದರು.
‘ಸಾದತ್ ಅವರು ಸುಳ್ಳು ಆರೋಪ ಮಾಡಿದ್ದಾರೆ. ಅವರ ಮೇಲೆ ನಮಗೆ ಯಾವುದೇ ದ್ವೇಷವಿಲ್ಲ. ವಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ನಮ್ಮ ಅಣ್ಣನವರ ಬಗ್ಗೆ ಕೆಟ್ಟ ರೀತಿಯ ಚಿತ್ರಗಳನ್ನು ಹಾಕಿ ಮಾನಹಾನಿ ಮಾಡುತ್ತಿದ್ದರು. ಹಾಗಾಗಿ ಇಂತಹ ಕೆಲಸ ಮಾಡಬೇಡಿ ಎಂದು ಬುದ್ಧಿವಾದ ಹೇಳಿದೆ’ ಎಂದು ಹಮೀದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.