
ದೇವನಹಳ್ಳಿ: ‘ಭಕ್ತಿ, ಜ್ಞಾನ ಹಾಗೂ ಸಮಾಜಮುಖಿ ಚಿಂತನೆಗಳ ಮೂಲಕ ಜನಮನಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಮಹಾತ್ಮ ಕೈವಾರ ತಾತಯ್ಯ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಯೋಗಿ ನಾರೇಯಣ ಯತೀಂದ್ರ ಜಯಂತಿಯಲ್ಲಿ ಮಾತನಾಡಿದರು.
ಕೈವಾರ ತಾತಯ್ಯರು 18ನೇ ಶತಮಾನದ ಪ್ರಸಿದ್ಧ ಸಂತ, ಕವಿ ಮತ್ತು ದಾರ್ಶನಿಕ. ಮಾನವೀಯ ಮೌಲ್ಯಗಳು, ಸತ್ಸಂಗ, ಸೌಹಾರ್ದತೆ ಹಾಗೂ ಧಾರ್ಮಿಕ ಸಹಿಷ್ಣುತೆಯ ಸಂದೇಶ ಸಾರಿದರು. ಸರಳ ಜೀವನ, ತಪಸ್ಸು ಮತ್ತು ಅಧ್ಯಾತ್ಮಿಕ ಚಿಂತನೆಗಳ ಮೂಲಕ ಜನರಲ್ಲಿ ನೈತಿಕತೆ ಮತ್ತು ಸತ್ಪ್ರವೃತ್ತಿಯನ್ನು ಬೆಳೆಸಲು ಶ್ರಮಿಸಿದರು ಎಂದು ಸ್ಮರಿಸಿದರು.
ಯೋಗಿ ನಾರೇಯಣ ಯತೀಂದ್ರರ ಕೀರ್ತನೆಗಳು, ಉಪದೇಶಗಳು ಹಾಗೂ ಭಕ್ತಿಪರ ಕಾವ್ಯಗಳು ಇಂದಿಗೂ ಭಕ್ತರಲ್ಲಿ ಪ್ರೇರಣೆ ಮೂಡಿಸುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅವರ ವಿಚಾರಗಳು ಜನಜಾಗೃತಿಗೆ ಕಾರಣವಾಗಿವೆ ಎಂದು ತಿಳಿಸಿದರು.
ಕೈವಾರ ತಾತಯ್ಯರ ಸಂದೇಶಗಳು ಇಂದಿನ ಸಮಾಜದಲ್ಲೂ ಪ್ರಸ್ತುತವಾಗಿದ್ದು, ಯುವಜನತೆಗೆ ಮಾರ್ಗದರ್ಶನ ನೀಡುವಂತಿವೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನೈತಿಕ ಮೌಲ್ಯಗಳನ್ನು ಬಲಪಡಿಸಲು ಅವರ ತತ್ವಗಳು ಪ್ರೇರಣೆಯಾಗಬೇಕು ಎಂದು ಹೇಳಿದರು.
ಕಂದಾಯ ಇಲಾಖೆ ಅಧಿಕಾರಿ ಇಂದ್ರಮ್ಮ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವು ಭಕ್ತಿಗೀತೆಗಳೊಂದಿಗೆ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.