ADVERTISEMENT

ವಿಜೃಂಭಣೆಯ ಹೂವಿನ ಕರಗ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 13:33 IST
Last Updated 10 ಮಾರ್ಚ್ 2020, 13:33 IST
ವಿಜಯಪುರದಲ್ಲಿ ಧರ್ಮರಾಯಸ್ವಾಮಿ ದ್ರೌಪತಮ್ಮ ಹೂವಿನಕರಗ ಮಹೋತ್ಸವದಲ್ಲಿ ಕರಗದ ಪೂಜಾರಿ ಭೀಮಣ್ಣ ಹೂವಿನ ಕರಗಹೊತ್ತು ಸಾಗಿದರು
ವಿಜಯಪುರದಲ್ಲಿ ಧರ್ಮರಾಯಸ್ವಾಮಿ ದ್ರೌಪತಮ್ಮ ಹೂವಿನಕರಗ ಮಹೋತ್ಸವದಲ್ಲಿ ಕರಗದ ಪೂಜಾರಿ ಭೀಮಣ್ಣ ಹೂವಿನ ಕರಗಹೊತ್ತು ಸಾಗಿದರು   

ವಿಜಯಪುರ: ಧರ್ಮರಾಯಸ್ವಾಮಿ ದ್ರೌಪತಮ್ಮ ಹೂವಿನ ಕರಗ ಮಹೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

ಕರಗದ ಪೂಜಾರಿ ಭೀಮಣ್ಣ ಅವರು ಮಲ್ಲಿಗೆ ಹೂವುಗಳಿಂದ ವಿಶೇಷವಾಗಿ ಅಲಂಕರಿಸಿದ ಕರಗವನ್ನು ಹೊತ್ತು ರಾತ್ರಿ11 ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಪ್ರತಿಯೊಂದು ಮನೆಯಿಂದ ಪೂಜೆ ಸ್ವೀಕರಿಸಿದರು.

ದೇವಾಲಯದಿಂದ ಕರಗ ಹೊರಬರುತ್ತಿದ್ದಂತೆ ವೀರಕುಮಾರರು ಅಲಗುಸೇವೆ ಅರ್ಪಿಸಿದ್ದು ಆಕರ್ಷಕವಾಗಿತ್ತು. ಘಂಟೆನಾದ, ಪೊಂಬುವಾದ್ಯದೊಂದಿಗೆ ಕರಗ ಪ್ರದಕ್ಷಿಣೆ ಸಾಗಿತು.ಭಕ್ತರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ದೇಗುಲ ಪ್ರದಕ್ಷಿಣೆ ಮಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗದೊಂದಿಗೆ ಹೆಜ್ಜೆ ಹಾಕಿದರು.

ADVERTISEMENT

ನಗರದ ಗಾಂಧಿ ಚೌಕ, ಗಂಗಾತಾಯಿ ದೇಗುಲ, ದರ್ಗಾದ ಬಳಿ ಕರಗಕ್ಕೆ ಪೂಜೆ ಸಲ್ಲಿಸಲಾಯಿತು. ಎಲ್ಲಮ್ಮ ತಾಯಿ ದೇವಾಲಯ, ಗುರಪ್ಪನಮಠದಿಂದ ಬಸ್ ನಿಲ್ದಾಣ, ಏಳು ಸುತ್ತಿನ ಕೋಟೆ, ಸತ್ಯಮ್ಮ ತಾಯಿ ಕಾಲೋನಿ, ಶಿವಗಣೇಶಸರ್ಕಲ್, ಶಿಡ್ಲಘಟ್ಟಕ್ರಾಸ್, ಬಸವೇಶ್ವರ ನಗರ ಸೇರಿದಂತೆ ಪಟ್ಟಣದಾದ್ಯಂತ ಸಂಚರಿಸಿ ಸ್ಥಳೀಯ ನಿವಾಸಿಗಳಿಂದ ಪೂಜೆ ಸ್ವೀಕರಿಸಿದರು. ಬೆಳಿಗ್ಗೆ 8 ಕ್ಕೆ ದೇವಾಲಯಕ್ಕೆ ಕರಗ ವಾಪಸಾಯಿತು.

ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ದೇವಿಗೆ ಕಳಸ ಪೂಜೆ, ಗಂಗೆಪೂಜೆ, ಬಳೆ ತೊಡಿಸುವ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳಂತೆ ನಡೆದವು. ಕರಗದ ಪ್ರಯುಕ್ತ ಹೂವಿನ ಪಲ್ಲಕ್ಕಿ ಮಾಡಿ ಮೆರವಣಿಗೆ ನಡೆಸಲಾಯಿತು.

ಉತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಕರಗವು ರಾಜ್ಯದ ಪ್ರಸಿದ್ಧ ಜಾನಪದ ಆಚರಣೆಯಾಗಿದ್ದು, ಆದಿಶಕ್ತಿ ದ್ರೌಪದಮ್ಮನನ್ನು ವಹ್ನಿಕುಲ ಕ್ಷತ್ರೀಯ, ತಿಗಳ ಕ್ಷತ್ರೀಯ ಸಮುದಾಯವು ಕುಲದೇವತೆಯಾಗಿ ಆರಾಧಿಸುತ್ತಾ ಬಂದಿವೆ. ಉತ್ಸವದ ಪ್ರಮುಖರಾದ ತಿಗಳ ಸಮುದಾಯದ ಬಹಳಷ್ಟು ಮಂದಿ ಮಾಂಸ, ಮದ್ಯಪಾನದಿಂದ ದೂರವಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಮತ್ತೊಂದು ವಿಶೇಷವಾಗಿದೆ ಎಂದು ಮುಖಂಡ ಚಂದ್ರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.