ADVERTISEMENT

ತಾಂತ್ರಿಕ ದೋಷ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂ ಸ್ಪರ್ಶ

ಮತ್ತೊಂದು ವಿಮಾನದ ಹಾರಾಟವೂ ರದ್ದು* ಬೇರೆ ವಿಮಾನದಲ್ಲಿ ಪ್ರಯಾಣಿಕರ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 16:13 IST
Last Updated 11 ಮಾರ್ಚ್ 2023, 16:13 IST
   

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ ಏರ್ ಏಷ್ಯಾ ವಿಮಾನ ಲಖನೌಗೆ ಹಾರಿದ ಕೆಲವೇ ನಿಮಿಷದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ತುರ್ತು ಭೂ ಸ್ಪರ್ಶ ಮಾಡಿತು.

ಅದೇ ರೀತಿ, ಕೊನೆ ಕ್ಷಣದಲ್ಲಿ ಕಂಡುಬಂದ ತಾಂತ್ರಿಕ ಸಮಸ್ಯೆಯಿಂದಾಗಿ ಅಹಮದಾಬಾದ್‌ಗೆ ಹಾರಲು ಸಜ್ಜಾಗಿ ನಿಂತಿದ್ದ ಮತ್ತೊಂದು ವಿಮಾನವೂ ಹಾರಾಟ ರದ್ದುಗೊಳಿಸಿದೆ. ಈ ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರನ್ನು ಬೇರೆ ವಿಮಾನಗಳಲ್ಲಿ ಲಖನೌ ಮತ್ತು ಅಹಮದಾಬಾದ್‌ಗೆ ಕಳಿಸಿಕೊಡಲಾಯಿತು.

ಶನಿವಾರ ಬೆಳಿಗ್ಗೆ 6.45ಕ್ಕೆ ಲಖನೌಗೆ ಹಾರಿದ ಏರ್‌ ಏಷ್ಯಾ ವಿಮಾನ (ಐ5-2472) ಟೇಕ್‌ ಆಫ್‌ ಆದ ಹತ್ತು ನಿಮಿಷದಲ್ಲಿಯೇ ತಾಂತ್ರಿಕ ದೋಷದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮರಳಿತು. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ADVERTISEMENT

175 ಪ್ರಯಾಣಿಕರೊಂದಿಗೆ ಬೆಳಗ್ಗೆ 11ಕ್ಕೆ ಅಹಮದಾಬಾದ್‌ಗೆ ಹೊರಡಲು ಸಜ್ಜಾಗಿದ್ದ ಆಕಾಸಾ ಏರ್‌ಲೈನ್ಸ್‌ (ಕ್ಯೂಪಿ 1325) ವಿಮಾನ ಟೇಕ್‌ ಆಫ್‌ ಆಗುವ ಮುನ್ನವೇ ತಾಂತ್ರಿಕ ದೋಷ ಕಂಡು ಬಂತು. ವಿಮಾನ ಸಂಚಾರ ರದ್ದು ಮಾಡಿ, ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಅಹಮದಾಬಾದ್‌ಗೆ ಕಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.