ADVERTISEMENT

ಭೂಸ್ವಾಧೀನ ಪರಿಹಾರ: ಕೆಐಎಡಿಬಿ ವಿಳಂಬ; ರೈತರಿಂದ ಕಾನೂನು ಹೋರಾಟ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 2:15 IST
Last Updated 20 ಸೆಪ್ಟೆಂಬರ್ 2025, 2:15 IST
<div class="paragraphs"><p>​ದೊಡ್ಡಬಳ್ಳಾಪುರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಆನಂದ್ ಮೂರ್ತಿ ಮಾತನಾಡಿದರು</p></div>

​ದೊಡ್ಡಬಳ್ಳಾಪುರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಆನಂದ್ ಮೂರ್ತಿ ಮಾತನಾಡಿದರು

   

ದೊಡ್ಡಬಳ್ಳಾಪುರ: ನಾಗದೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕೆಐಎಡಿಬಿ ರೈತರಿಂದ ಫಲವತ್ತಾದ ಜಮೀನು ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ನೀಡದೆ ವಿಳಂಬ ಮಾಡುತ್ತಿದೆ ಎಂದು ರೈತ ಮುಖಂಡ, ನಾಗದೇನಹಳ್ಳಿ ಎಂಪಿಸಿಎಸ್‌ ಅಧ್ಯಕ್ಷ ಆನಂದಮೂರ್ತಿ ಆರೋಪಿಸಿದರು.

ರೈತರಿಂದ ಪಡೆದ ಜಮೀನುಗಳಲ್ಲಿ ವರ್ಷಗಳಾದರೂ ಕೈಗಾರಿಕೆ ಸ್ಥಾಪಿಸದೇ ಅನ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಸ್ವಾಧೀನ ಮಾಡಿಕೊಂಡಿರುವ ರೈತರ ಜಮೀನುಗಳಿಗೆ ಕೂಡಲೇ ಪರಿಹಾರ ಧನ ಬಿಡುಗಡೆ ಮಾಡದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ADVERTISEMENT

ಸಾವಿರಾರು ಎಕರೆ ವ್ಯವಸಾಯಕ್ಕೆ ಯೋಗ್ಯವಾದ ಫಲವತ್ತಾದ ಭೂಮಿಯನ್ನು ಕೆಐಎಡಿಬಿ ಸ್ವಾಧೀನಕ್ಕೆ ಪಡೆಯುತ್ತಿದೆ. ಆದರೆ ಭೂಮಿಯ ಮಾಲೀಕ ರೈತನಿಗೆ ಮಾತ್ರ ಹಣ ಕೊಡದೆ ಸತಾಯಿಸುತ್ತಿದೆ. ರೈತ ವ್ಯವಸಾಯ ಮಾಡಲು ಜಮೀನು ಇಲ್ಲದೆ, ಪರಿಹಾರ ಧನವೂ ಬಾರದೆ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.

ಮಧ್ಯವರ್ತಿಗಳ ಹಾವಳಿ

ಟಿಎಪಿಎಂಸಿಎಸ್‌ ನಿರ್ದೇಶಕ ಎಂ.ಆನಂದ್‌ ಮಾತನಾಡಿ, ಪರಿಹಾರ ಧನಕ್ಕಾಗಿ ರೈತರು ಕೆಐಎಡಿಬಿ ಕಚೇರಿಗೆ ಪ್ರತಿನಿತ್ಯ ಅಲೆದಾಡುವಂತಾಗಿದೆ. ನಿಯಮಾನುಸಾರ ಪರಿಹಾರ ಸಹ ನೀಡುತ್ತಿಲ್ಲ. ಭೂಮಿಯನ್ನು ಕಸಿದು ಕೊಂಡ ಸಂಸ್ಥೆ ಪರಿಹಾರ ನೀಡದೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಪರಿಹಾರ ಧನ ಪಡೆಯುವ ವಿಷಯದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕೂಡಲೇ ಅಧಿಕಾರಿಗಳು ಇಂತಹವರಿಗೆ ಕಡಿವಾಣ ಹಾಕಬೇಕಿದೆ ಎಂದರು.

ರೈತ ಮುಖಂಡರಾದ ನರಸಿಂಹಮೂರ್ತಿ, ರಾಮಣ್ಣ,ಮುನೇಗೌಡ, ಶಿವಕುಮಾರ್, ಟಿ.ಎಸ್‌.ನರಸಿಂಹಮೂರ್ತಿ ಇದ್ದರು.

ಕೈಗಾರಿಕೆ ಉದ್ದೇಶಕ್ಕೆ ಪಡೆದ ಜಮೀನಿನಲ್ಲಿ ಅ‍ಪಾರ್ಟ್‌ಮೆಂಟ್‌

ಉದ್ಯೋಗ ಸಿಗಲಿ ಎಂದು ರೈತರು ನೀಡಿದ್ದ ಭೂಮಿ ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಈಗಾಗಲೇ ಕಾರ್ಖಾನೆಗಳಿಗೆ ನೀಡಿರುವ ಜಾಗದಲ್ಲಿ ಕಾರ್ಖಾನೆಯವರೇ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಿ ವಾಸಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ. ಹೀಗೆ ಮುಂದುವರೆದರೆ ಭೂಮಿ ಕಳೆದುಕೊಂಡ ರೈತ ಜೀವನ ಕಟ್ಟಿಕೊಳ್ಳುವುದು ಹೇಗೆ ಎಂದು ನಾಗದೇನಹಳ್ಳಿ ಎಂಪಿಸಿಎಸ್‌ ಅಧ್ಯಕ್ಷ ಆನಂದಮೂರ್ತಿ ಪ್ರಶ್ನಿಸಿದರು.

ಕೈಗಾರಿಕಾ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ನಿರ್ಬಂಧ ವಿಧಿಸಲಿ. ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಇನ್ನು ಮುಂದೆ ಯಾವುದೇ ಹೊಸ ಭೂಸ್ವಾಧೀನ ಪ್ರಕ್ರಿಯೆ ನಡೆಸಬಾರದು. ಕೈಗಾರಿಕೆ ಸ್ಥಾಪನೆ ಮಾಡದೇ ಇದ್ದರೆ ರೈತರ ಭೂಮಿ ವಾಪಾಸು ನೀಡಲಿ. ಸರ್ಕಾರ ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೇ ಇದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.  ಖಾಲಿ ಬಿದ್ದಿದೆ 20 ಸಾವಿರ ಎಕರೆ ಸರ್ಕಾರದಲ್ಲಿ ಹಣ ಇಲ್ಲದ ಮೇಲೆ ಭೂ ಸ್ವಾಧೀನ ನಿಲ್ಲಿಸಬೇಕು. ಈಗಾಗಲೇ ಸಾಕಷ್ಟು ಭೂಮಿಯನ್ನು ರೈತರಿಂದ ಕಸಿದುಕೊಂಡಿರುವ ಕೆಐಎಡಿಬಿ ಮತ್ತಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಸುಮಾರು 20 ಸಾವಿರ ಎಕರೆ ಸ್ವಾಧೀನಪಪಡಿಸಿಕೊಂಡಿರುವ ಭೂಮಿ ಖಾಲಿ ಬಿದ್ದಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.