ADVERTISEMENT

ಸಮಯಕ್ಕೆ ಬಾರದ ಬಸ್‌ವಿದ್ಯಾರ್ಥಿಗಳ ಪರದಾಟ

ಮತದಾರರ ಓಲೈಕೆ: ರಾಜಕಾರಣಿಗಳಿಂದ ಬಸ್‌ ಬುಕ್ಕಿಂಗ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 4:44 IST
Last Updated 14 ಜನವರಿ 2023, 4:44 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗಧೀರನಹಳ್ಳಿ ಕ್ರಾಸ್‌ನಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗಧೀರನಹಳ್ಳಿ ಕ್ರಾಸ್‌ನಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ದೊಡ್ಡಬಳ್ಳಾಪುರ: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ವಿವಿಧ ರಾಜಕೀಯ ಪಕ್ಷದ ಮುಖಂಡರು ಪ್ರವಾಸಕ್ಕೆ ಕಳಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲುಪಲು ಸಾಧ್ಯವಾಗದೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಮತದಾರರನ್ನು ಧರ್ಮಸ್ಥಳ, ಓಂ ಶಕ್ತಿಗಳಿಗೆ ಸಾರಿಗೆ ಬಸ್‌ಗಳನ್ನು ಗುತ್ತಿಗೆ ಪಡೆದು ಕಳುಸಲಾಗುತ್ತಿದೆ. ಇದರಿಂದ ಚಾಲಕರ ಕೊರತೆ ಎದುರಾಗಿ ತಾಲ್ಲೂಕಿನಲ್ಲಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಸಮರ್ಪಕ ಸಾರಿಗೆ ಸೌಲಭ್ಯ ಇಲ್ಲದೆ ಕಾಲೇಜುಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗುವಂತಾಗಿದೆ.

ತಾಲ್ಲೂಕಿನ ಲಿಂಗಧೀರನಹಳ್ಳಿಯಿಂದ-ದೊಡ್ಡಬಳ್ಳಾಪುರ ನಡುವೆ ಸಂಚರಿಸುವ ಸಾರಿಗೆ ಬಸ್ ನಿಗದಿತ ಸಮಯಕ್ಕೆ ಬರುತ್ತಿಲ್ಲ ಎಂದು ಆರೋಪಿಸಿ, ವಿದ್ಯಾರ್ಥಿಗಳು ಬಸ್ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ADVERTISEMENT

ಪ್ರತಿದಿನ 7.45ಕ್ಕೆ ಬರಬೇಕಾದ ಬಸ್ ನಿಗದಿತ ಸಮಯಕ್ಕೆ ಬರುತ್ತಿಲ್ಲ ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. 9.30ಕ್ಕೆ ತರಗತಿಗಳು ಆರಂಭವಾಗುತ್ತವೆ. ಆದರೆ, ಕಾಲೇಜು ತಲುಪುವ ಹೊತ್ತಿಗೆ 10.30ಕ್ಕೆ ಆಗುತ್ತಿದೆ. ಪ್ರಾಂಶುಪಾಲರು ಕಾಲೇಜಿಗೆ ಬಿಡುತ್ತಿಲ್ಲ. ಈ ಕುರಿತಂತೆ ಡಿಪೊ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸದ ಕಾರಣ ಬಸ್ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಈ ಕುರಿತಂತೆ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜ್‌ಕುಮಾರ್, ರಾಜಕೀಯ ಲಾಭಕ್ಕೆ ಮಾಡುತ್ತಿರುವ ಪ್ರವಾಸಗಳಿಂದ ಕಾಲೇಜಿಗೆ ತೆರಳಬೇಕಾದ ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.