ADVERTISEMENT

ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ

ಮೈಲನಹಳ್ಳಿ: ಕಂಪನಿಯಿಂದ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:12 IST
Last Updated 17 ಸೆಪ್ಟೆಂಬರ್ 2021, 4:12 IST
ದೇವನಹಳ್ಳಿ ತಾಲ್ಲೂಕಿನ ಮೈಲನಹಳ್ಳಿಯಲ್ಲಿ ಪ್ರತಿಷ್ಠಿತ ಕಂಪನಿಯಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಗನವಾಡಿ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಐಟಿಸಿ ವ್ಯವಸ್ಥಾಪಕ ವಿಜಯ್ ಮಾತನಾಡಿದರು. ಬಂಡಿಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್, ಲೋಹಿತ್, ವಿನಯ್ ಗೌಡ, ಎನ್.ಎಂ. ವಿಜಯ್ ಹಾಜರಿದ್ದರು
ದೇವನಹಳ್ಳಿ ತಾಲ್ಲೂಕಿನ ಮೈಲನಹಳ್ಳಿಯಲ್ಲಿ ಪ್ರತಿಷ್ಠಿತ ಕಂಪನಿಯಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಗನವಾಡಿ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಐಟಿಸಿ ವ್ಯವಸ್ಥಾಪಕ ವಿಜಯ್ ಮಾತನಾಡಿದರು. ಬಂಡಿಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್, ಲೋಹಿತ್, ವಿನಯ್ ಗೌಡ, ಎನ್.ಎಂ. ವಿಜಯ್ ಹಾಜರಿದ್ದರು   

ದೇವನಹಳ್ಳಿ:‘ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣದ ಮೂಲಕ ಭದ್ರಬುನಾದಿ ಒದಗಿಸುವಲ್ಲಿ ಪೋಷಕರು ಹಾಗೂ ಸಮುದಾಯದ ಪಾತ್ರ ಮಹತ್ವದ್ದಾಗಿದೆ’ ಎಂದು ಮೀನುಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಹೇಳಿದರು.

ತಾಲ್ಲೂಕಿನ ಮೈಲನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರತಿಷ್ಠಿತ ಕಂಪನಿಯಿಂದ ಗುರುವಾರ ನೂತನ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿಗಳ ಕಾರ್ಯ ನಿರ್ವಹಣೆಗೆ ಬಾಡಿಗೆ ಕಟ್ಟಡಗಳೇ ಆಸರೆಯಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಇಲಾಖೆಯ ಕಾರ್ಯ ನಿರ್ವಹಣೆಗೆ ಸಾಕಷ್ಟು ಸವಾಲು ಎದುರಾಗಿದೆ ಎಂದು ಹೇಳಿದರು.

ADVERTISEMENT

ಅಂಗನವಾಡಿಗಳಿಗೆ ಸ್ವಂತ ಕಟ್ಟಡಕ್ಕೆ ಹುಡುಕಾಟ ನಡೆಯುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಫಲ ಕಾಣುತ್ತಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳಿಗೆ ಮೊಬೈಲ್ ಗೇಮ್‌ಗಳಿಂದ ದೂರ ವಿರಿಸಿ, ಅವರನ್ನು ಉತ್ತಮ ಸಂಸ್ಕಾರವಂತರನ್ನಾಗಿ ಮಾಡಬೇಕಿದೆ ಎಂದರು.

ಬೆಂಗಳೂರು ಉತ್ತರ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಜಯ್ ಕುಮಾರ್ ಮಾತನಾಡಿ, ಮೈಲನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಹೈಟೆಕ್ ಮಾದರಿಯಲ್ಲಿ ಅಂಗನವಾಡಿ ಕೇಂದ್ರವನ್ನು ಹೊಸ ವಿನ್ಯಾಸದೊಂದಿಗೆ ನಿರ್ಮಿಸಿಕೊಡಲು ಪ್ರತಿಷ್ಠಿತ ಕಂಪನಿಗಳು ಮುಂದೆ ಬಂದಿರುವುದು ಪ್ರಶಂಸನೀಯವಾಗಿದೆ ಎಂದರು.

ಬಂಡಿಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್ ಮಾತನಾಡಿ, ಸರ್ಕಾರಕ್ಕೆ ಪ್ರತಿಯೊಂದು ಕಾರ್ಯಕ್ರಮಕ್ಕೂ ಅನುದಾನ ಒದಗಿಸುವುದು ಕಷ್ಟವಾಗಲಿದೆ. ಪಂಚಾಯಿತಿ ಸುತ್ತಮುತ್ತ ಅಭಿವೃದ್ಧಿ ಹೊಂದಿರುವ ಕಂಪನಿಗಳು ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಮುಂದೆ ಬಂದಿರುವುದು ಶ್ಲಾಘನೀಯ. ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಕಂಪನಿಗಳಿಂದ ಹೆಚ್ಚಿನ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಬಂಡಿಕೊಡಿಗೆನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಹಿತ್, ಮೀನುಕುಂಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನಯ್ ಗೌಡ, ಐಟಿಸಿ ಕಾರ್ಖಾನೆಯ ಸೆಕ್ಯೂರಿಟಿ ವ್ಯವಸ್ಥಾಪಕ ಎನ್.ಎಂ. ವಿಜಯ್, ಅಧಿಕಾರಿ ಆಕಾಂಕ್ಷಾ, ವಾಶ್ ಸಂಸ್ಥೆಯ ಯೋಜನಾ ಅಧಿಕಾರಿ ಸ್ಯಾಮ್ ಡೆನಿಸ್, ಮೈಲನಹಳ್ಳಿ ಸರ್ಕಾರಿ ಶಾಲೆಯ ಸಿಆರ್‌ಪಿ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.