ವಿಜಯಪುರ:ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದೇ ಇರುವ ಕಾರಣ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆವಹಿಸಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ
ಹೇಳಿದರು.
ಚನ್ನರಾಯಪಟ್ಟಣ ಹೋಬಳಿಯ ಭಟ್ಟರಮಾರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಿರ್ಮಿತಿ ಕೇಂದ್ರ ಹಾಗೂ ವಿದ್ಯಾವಿಕಾಸ ಯೋಜನೆಯಡಿ ₹ 10.50 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇದರ ಜೊತೆಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೂ ಅನುದಾನ ಬಿಡುಗಡೆಯಾಗುತ್ತಿದೆ. ಈಗಾಗಲೇ ಪಾಪನಹಳ್ಳಿ, ಚೀಮಾಚನಹಳ್ಳಿ ಅಂಗನವಾಡಿ ಕಟ್ಟಡಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಕೊರೊನಾ ಸೋಂಕು ಶಾಲೆ ತೆರೆಯುವುದಕ್ಕೆ ಅಡ್ಡಿಯಾಗಿದ್ದು, ಮಕ್ಕಳಿಗೆ ಆನ್ಲೈನ್ ಮುಖಾಂತರ ತರಗತಿ ನಡೆಯುತ್ತಿವೆ. ಸಮಯ ಹಾಳು ಮಾಡದೇ ಪೋಷಕರು ಸಹಕರಿಸಿ ಮೊಬೈಲ್ಗಳನ್ನು ಆಗಾಗ ಗಮನಿಸುತ್ತಿದ್ದರೆ ಬೇರೆ ಕಡೆ ಮಕ್ಕಳ ಗಮನ ಹೋಗುವುದಿಲ್ಲ. ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಮನೋಹರ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಶಾಲೆಗಳ ಅಭಿವೃದ್ಧಿಗೆ ಸಿ.ಎಸ್.ಆರ್ ಅನುದಾನದಡಿ ಕಟ್ಟಡ ನಿರ್ಮಾಣ ಆಗುತ್ತದೆ. ಶಾಸಕರು ಈಗಾಗಲೇ ತಂಗುದಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮುನೇಗೌಡ, ಹೋಬಳಿ ಅಧ್ಯಕ್ಷ ಮುನಿರಾಜು, ಜಯರಾಮೇಗೌಡ, ಸಿ.ಎಸ್. ರಾಜಣ್ಣ, ಮೇನಕಾ ಕೃಷ್ಣಮೂರ್ತಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಡೇರಿ ಅಧ್ಯಕ್ಷ ಕಾಳಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರಾಜು, ಲಕ್ಷ್ಮಿ, ಉಮೇಶ್, ಎ. ಕುಮಾರ್, ನಾರಾಯಣಸ್ವಾಮಿ, ಐಬಸಾಪುರ ಎಂಪಿಸಿಎಸ್ ಮಾಜಿ ಅಧ್ಯಕ್ಷ ಬಿ. ರಾಜಣ್ಣ, ಮುಖಂಡರಾದ ಐಬಸಾಪುರ ಎನ್. ಗೋಪಾಲಯ್ಯ, ಲೋಕೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.