ಸೂಲಿಬೆಲೆ: ಸಾರ್ವಜನಿಕರಿಗೆ ಪೊಲೀಸರು ಹೊರಗೆ ಬರಲು ನಿರ್ಬಂಧ ಹೇರುವುದಕ್ಕಿಂತ ಜನರೇ ಸ್ವಯಂ ನಿರ್ಬಂಧವನ್ನು ಹಾಕಿಕೊಳ್ಳವ ಮೂಲಕ ‘ಲಾಕ್ ಡೌನ್’ ನ ಉದ್ದೇಶ ಯಶಸ್ವಿಗೊಳಿಸಿ ಕೊರೊನಾ ಓಡಿಸಬೇಕು ಎಂದು ಹೊಸಕೋಟೆ ತಾಲ್ಲೂಕು ಡಿವೈಎಸ್ಪಿ ಎನ್.ಬಿ.ಸಕ್ರಿ ತಿಳಿಸಿದರು.
ಸೂಲಿಬೆಲೆ ಪಟ್ಟಣದಲ್ಲಿ ಷಬ್-ಎ-ಬರಾತ್ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಪಥಸಂಚಲನ ಹಾಗೂ ಕೊರೊನಾ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.
‘ಕೊರೊನಾ ರೋಗ ಭಯಂಕರ ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ತಡೆಯಲು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಪಾಲಿಸಬೇಕು. ರೂಢಿಸಿಕೊಳ್ಳಬೇಕು. ಅನಾವಶ್ಯಕವಾಗಿ ಮನೆಯ ಹೊರಗೆ ಬರುವ ಚಾಳಿಯನ್ನು
ಬಿಟ್ಟು ಬಿಡಬೇಕು. ಎಂದ ಅವರು ಮನೆಗಳಲ್ಲಿ ಆಗಾಗ ಕೈಗಳನ್ನು ಸಾಬೂನು, ಸ್ಯಾನಿಟೈಸರ್ಗಳಿಂದ ತೊಳೆದು ಶುದ್ಧವಾಗಿರಿಸಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಂದಾಗ ಮುಖಕ್ಕೆ ಮಾಸ್ಕ್ ಧರಿಸಿ’ ಎಂದರು.
ನಂದಗುಡಿ ಸರ್ಕಲ್ ಇನ್ಸ್ಪೆಕ್ಟರ್ ರವೀಂದ್ರ ಅವರು ಷಬ್-ಎ-ಬರಾತ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ಡಿದರು.
ಸೂಲಿಬೆಲೆ ಠಾಣೆ ಸಬ್ ಇನ್ಸ್ ಪೆಕ್ಟರ್ ಮಧುಸೂದನ್ ಮಾತನಾಡಿ, ‘ಹಬ್ಬವನ್ನು ಮನೆಗಳಲ್ಲಿಯೇ ಆಚರಿಸಿಕೊಳ್ಳಬೇಕು. ವಿನಾಕಾರಣ ಸಾರ್ವಜನಿಕರು ಹೊರಗೆ ಓಡಾಡಬಾರದು’ ಎಂದ ಅವರು, ‘ಪಟ್ಟಣದಲ್ಲಿ ಬಂದೋಬಸ್ತ್ಗಾಗಿ ಕೆಎಸ್ಆರ್ಪಿಯ ಒಂದು ತುಕಡಿ ನಿಯೋಜಿಸಲಾಗಿದೆ’ ಎಂದರು.
ಸೂಲಿಬೆಲೆ ಪೊಲೀಸ್ ಸಿಬ್ಬಂದಿ ಹಾಗೂ ಕೆಎಸ್ಆರ್ಪಿ ತುಕಡಿ ಪಟ್ಟಣದ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.