ವಿಜಯಪುರ(ದೇವನಹಳ್ಳಿ): ವಿರೋಧ ಪಕ್ಷದವರು ಕಾಂಗ್ರೆಸ್ ಸರ್ಕಾರದ ಮೇಲೆ ಎಷ್ಟೇ ಆರೋಪ ಮಾಡಿದರೂ, ಅವೆಲ್ಲವೂ ನಮ್ಮ ಗೆಲುವಿನ ಮೆಟ್ಟಿಲು ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಹೋಬಳಿಯ ವೆಂಕಟಗಿರಿಕೋಟೆ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ 60 ವರ್ಷ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ನಿಂ ಎಷ್ಟು ಅಭಿವೃದ್ಧಿಯಾಗಿದೆ, 10 ವರ್ಷಗಳಲ್ಲಿ ಬಿಜೆಪಿಯ ದುರಾಡಳಿತ ಹೇಗಿದೆ, ಎನ್ನುವುದನ್ನು ಜನ ಯೋಚನೆ ಮಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಹೇಗಿದ್ದವು. ಈಗ ಹೇಗಿವೆ ಎನ್ನುವ ಬಗ್ಗೆಯೂ ಚಿಂತನೆ ಮಾಡಿದ್ದಾರೆ. ಜನರು ನಮ್ಮ ಪರವಾಗಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಎಲ್ಲಾ ಮುನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಹೇಳಿದರು.
ರಾಜ್ಯದ ಹೆಣ್ಣು ಮಕ್ಕಳು, ತಾಯಂದಿರು ಸ್ವಾಭಿಮಾನಿಗಳಿದ್ದಾರೆ. ಅವರು ಪಡೆದುಕೊಳ್ಳುತ್ತಿರುವ ಗ್ಯಾರಂಟಿ ಯೋಜನೆಗಳಿಗೆ ವಿರುದ್ಧವಾಗಿ ಮತ ಹಾಕಲಾರರು. ಅವರ ಆಶೀರ್ವಾದವೇ ನಮಗೆ ಶಕ್ತಿಯಾಗಲಿದೆ ಎನ್ನುವ ಅಚಲವಾದ ವಿಶ್ವಾಸವಿದೆ ಎಂದರು.
ಕೆಪಿಸಿಸಿ ಸದಸ್ಯ ಚಿನ್ನಪ್ಪ, ಯುವ ಕಾಂಗ್ರೆಸ್ ಮುಖಂಡ ಆರ್.ಅಮರನಾಥ್ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ಮುಖಂಡ ವಿ.ರಾಮಕೃಷ್ಣಪ್ಪ, ಅಭ್ಯರ್ಥಿ ಸಹೋದರ ಸುಂದರ್ ರಾಮಯ್ಯ, ಮೂರ್ತಿ, ಸಜ್ಜದ್, ಮಹೇಶ್, ಮುನಿಬೈರಪ್ಪ, ದೇವರಾಜ್, ವೇಣುಗೋಪಾಲ್, ಹುರುಳುಗುರ್ಕಿ ರಾಜಣ್ಣ, ಶ್ರೀನಿವಾಸಮೂರ್ತಿ, ಚಿನ್ನಪ್ಪ, ತಿತ್ತಪ್ಪ, ಬುಡುತಪ್ಪ, ಗ್ಯಾಸ್ ಶ್ರೀನಿವಾಸ್, ವಿಶ್ವನಾಥ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.