ದೇವನಹಳ್ಳಿ: ಹೈದಾರಬಾದ್ನಿಂದ ಪಟ್ಟಣಕ್ಕೆ ಲಾಂಗ್ ಡ್ರೈವ್ ನೆಪದಲ್ಲಿ ಬಂದಿದ್ದ ಕಳ್ಳರ ಗುಂಪನ್ನು ಹಿಡಿಯುವಲ್ಲಿ ದೇವನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ವ್ಯಾಗನಾರ್ ಕಾರು, ಕಬ್ಬಿಣದ ರಾಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಐಷಾರಾಮಿ ಜೀವನ ಮಾಡಲು, ಕಳ್ಳತನ, ದರೋಡೆ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು, ಸಿಕ್ಕ ಸಿಕ್ಕ ಅಂಗಡಿಗಳನ್ನು ದೋಚಲು ಮುಂದಾಗಿದ್ದರು. ಈ ತಂಡದಲ್ಲಿ ಮೂವರು ಮಹಿಳೆಯರು ಇದ್ದಾರೆ.
ರಾಷ್ಟ್ರೀಯ ಹೆದ್ದಾರಿ 7ರ ಬಳಿಯ ಅಮಾನಿಕೆರೆ ಬಳಿ ಖದೀರಮರ ತಂಡ ಕಬ್ಬಿಣದ ರಾಡ್ಗಳನ್ನು ಉಪಯೋಗಿಸಿ ಅಂಗಡಿಗೆ ಕನ್ನ ಹಾಕಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ, ಬೆಳ್ಳಗಿನ ಜಾವ ಹೆದ್ದಾರಿಯಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ. ಬಂಧಿತರು ತೆಲಂಗಾಣ ರಾಜ್ಯದ ಪ್ರಕಾಶಂ ಜಿಲ್ಲೆಯವರಾಗಿದ್ದು, ಸುಮಲತಾ (24), ಅಂಕಮ್ಮ (30), ರಮ್ಯಾ (19) ಇಸ್ಮಾಯಿಲ್ (19) ಎಂಬುವರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಾಂಗ್ಡ್ರೈವ್ ಗೀಳಿನಿಂದ ಹೊಸ ಕಾರು ಖರೀದಿ ಮಾಡಿದ್ದ ಇವರು, ಅಂಗಡಿಗಳಿಗೆ ಕನ್ನ ಹಾಕುತ್ತಿದ್ದರು. ಐಷಾರಾಮಿ ಜೀವನ ನಿರ್ವಹಣೆಗಾಗಿ ದೋಚಿದ ದುಡ್ಡನ್ನು ಖರ್ಚು ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಕಳ್ಳತನ ಮಾಡಿದ ದುಡ್ಡಿನಲ್ಲಿ ವ್ಯಾಗನಾರ್ ಕಾರು ಖರೀದಿ ಮಾಡಿರುವ ಇವರು, ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಅಪರಾಧ ಕೃತ್ಯ ಮಾಡುತ್ತಿದ್ದರು. ಬಂಧಿತರೆಲ್ಲಾ ಸ್ನೇಹಿತರಾಗಿದ್ದರು ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.