ಚನ್ನರಾಯಪಟ್ಟಣ (ದೇವನಹಳ್ಳಿ): ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗಂಗವಾರದಲ್ಲಿರುವ ಪ್ರಸನ್ನ ಪಾರ್ವತಿ ಸಮೇತ ಸೋಮೇಶ್ವರ ದೇಗುಲ ಆವರಣದಲ್ಲಿ ಶಿವರಾತ್ರಿ ಅಂಗವಾಗಿ ಬುಧವಾರ ರಥೋತ್ಸವ ಜರುಗಿತು.
ನಂದಿ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ವಿವಿಧ ವಾದ್ಯಗಳ ವಾದನದೊಂದಿಗೆ ಜೋಡೆತ್ತುಗಳು ರಥದ ಮುಂದೆ ಸಾಗಿದರೇ, ಹರ ಹರ ಮಹಾದೇವ ಎಂಬ ಘೋಷಣ ಮಾಡಿದರು ಭಕ್ತರು. ರಥವು ಗಂಗವಾರದಿಂದ ತಬ್ಬು ಲಿಂಗೇಶ್ವರ ದೇಗುಲದವರೆಗೂ ಸಾಗಿತು.
ದಾರಿಯುದ್ದಕ್ಕೂ ಕಾರ್ಯಕ್ರಮದ ಆಯೋಜಕರು ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ಭಕ್ತರಿಗೆ ವಿತರಣೆ ಮಾಡಿದರು. ರಥ ಸಾಗುವ ಬೀದಿಗಳಲ್ಲಿ ನೀರು ಹಾಕಿ ಶುಚ್ಚಿಗೊಳ್ಳಿಸಿ ದೇವರನ್ನು ಕಂಡು ಭಕ್ತರು ನಮಿಸಿದರು.
ಸೋಮೇಶ್ವರನ ವರ ದರ್ಶನಕ್ಕಾಗಿ ಜನರು ಸರತಿ ಸಾಲಿನಲ್ಲಿ ನಿಂತು, ನಮಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಹೆಂಗೆಳೆಯರು ಶಿವನಾಮ ಹಾಡುಗಳ ಹಾಡಿ ನೆರೆದಿದ್ದ ಭಕ್ತರಲ್ಲಿ ಭಕ್ತಿ,ಭಾವ ಹೆಚ್ಚಿಸಿದರು.
ಕುಟುಂಬ ಸಮೇತರಾಗಿ ಜನರು ದೇಗುಲಕ್ಕೆ ಭೇಟಿ ದರ್ಶನ ಪಡೆದರು.
ಗರ್ಭಗುಡಿಯಲ್ಲಿರುವ ಪಾರ್ವತಿ ದೇವಿಯ ದರ್ಶನ ಪಡೆದು ಕೋಷ್ಟಕಗಳಲ್ಲಿ ಗಣಪತಿ ಶಿಲ್ಪ, ದೇಗುಲದ ಸುತ್ತವಿರುವ ಸೂರ್ಯ, ಭೈರವ, ಕಾರ್ತಿಕೇಯ, ನಂದಿ ಪ್ರದಕ್ಷಣೆ ಹಾಕಿ ರಥೋತ್ಸವದಲ್ಲಿ ಭಾಗಿಯಾದರು.
ದೇವಾಲಯ ಸಮಿತಿ ಅಧ್ಯಕ್ಷ ರಾಜಣ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ಜಯರಾಮೇಗೌಡ, ಚೈತ್ರಾ ಮನೋಹರ್, ತಾ.ಪಂ ಮಾಜಿ ಸದಸ್ಯರಾದ ಲಕ್ಷ್ಮಣ್ಗೌಡ, ಮಂಜುನಾಥ್, ಗ್ರಾ.ಪಂ ಸದಸ್ಯರಾದ ಅಶ್ವಥ್ನಾರಾಯಣ್, ನಾರಾಯಣಸ್ವಾಮಿ, ಗ್ರಾಮದ ಬೈರೇಗೌಡ, ಕೃಷ್ಣಪ್ಪ, ಬೈಚಾಪುರ ಶಶಿಧರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.