ADVERTISEMENT

‘ಮುತ್ತಾನಲ್ಲೂರು ಅಮಾನಿ ಕೆರೆ ರಕ್ಷಿಸಿ’

ಕಲುಷಿತಗೊಳ್ಳುತ್ತಿರುವ ಕೆರೆ l ಸಂರಕ್ಷಣೆಗೆ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 14:22 IST
Last Updated 14 ಮಾರ್ಚ್ 2020, 14:22 IST
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಅಮಾನಿ ಕೆರೆಯು ಕೈಗಾರಿಕೆಗಳ ತ್ಯಾಜ್ಯದಿಂದ ಕಲುಷಿತಗೊಂಡಿದೆ
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಅಮಾನಿ ಕೆರೆಯು ಕೈಗಾರಿಕೆಗಳ ತ್ಯಾಜ್ಯದಿಂದ ಕಲುಷಿತಗೊಂಡಿದೆ   

ಆನೇಕಲ್: ಗ್ರಾಮಗಳ ಜೀವನಾಡಿಯಾಗಿದ್ದ ಕೆರೆಗಳು ಕಲುಷಿತವಾಗಿ ಜನರಿಂದ ದೂರವಾಗುವಂತಾಗಿವೆ. ಕೆರೆಯಲ್ಲಿ ನೀರಿದ್ದರೂ ಯಾವುದೇ ಉಪಯೋಗಕ್ಕೆ ಬಾರದಂತಾಗಿರುವ ದುಸ್ಥಿತಿ ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಅಮಾನಿ ಕೆರೆಗೆ ಬಂದಿದ್ದು, ಕೆರೆ ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಅಮಾನಿ ಕೆರೆಯು ಸುಮಾರು 167.94 ಹೆಕ್ಟೇರ್‌ ವಿಸ್ತಿರ್ಣದ ವಿಶಾಲ ಪ್ರದೇಶ ಹೊಂದಿದೆ. ಹಿಂದಿನ ಕಾಲದಲ್ಲಿ ಕೆರೆಯು ಸುತ್ತಮುತ್ತಲ ಗ್ರಾಮಗಳ ಅಂತರ್ಜಲವನ್ನು ಕಾಪಾಡಿಕೊಂಡು ಬಂದಿತ್ತು. ವಿಶಾಲವಾದ ಕೆರೆಯ ಅಚ್ಚುಕಟ್ಟುವಿಸ್ತಾರವಾಗಿತ್ತು. ಕೆರೆ ನೀರನ್ನೇ ಅವಲಂಬಿಸಿ ಸಾವಿರಾರುರೈತರು ಬದುಕು ಕಟ್ಟಿಕೊಂಡಿದ್ದರು. ಇದೀಗ ಕೆರೆಗೆ ಸಂಚಕಾರ ಬಂದಿದೆ.

ಕೈಗಾರೀಕರಣದ ಫಲವಾಗಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಮತ್ತು ಚಂದಾಪುರ ಪುರಸಭೆ ವ್ಯಾಪ್ತಿಯ ಕಲುಷಿತ ನೀರು ಅಮಾನಿ ಕೆರೆ ಒಡಲು ಸೇರುತ್ತಿದೆ.ಚಂದಾಪುರ ಚೋಳರ ಕೆರೆಯ ಮೂಲಕ ಮುತ್ತಾನಲ್ಲೂರು ಕೆರೆಗೆ ಕಲ್ಮಶಗೊಳ್ಳುತ್ತಿದೆ ಎಂದು ಹೇಳಿದರು.

ADVERTISEMENT

ಚಂದಾಪುರ ಪುರಸಭೆ ವ್ಯಾಪ್ತಿಯ ಚರಂಡಿ ನೀರು ಸಂಸ್ಕರಣಗೊಳ್ಳದೇ ಚೋಳರ ಕೆರೆಯ ಮೂಲಕ ಮುತ್ತಾನಲ್ಲೂರು ಕೆರೆಗೆ ಹರಿದು ಬರುತ್ತಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಕೈಗಾರಿಕೆಗಳ ತ್ಯಾಜ್ಯದಿಂದಾಗಿ ಕೆರೆ ತುಂಬಿದೆ. ಆದರೆ ಈ ಕೆರೆಯ ನೀರು ಯಾವುದೇ ಬಳಕೆಗೂ ಉಪಯೋಗವಾಗುತ್ತಿಲ್ಲ. ಈ ಕೆರೆಗೆ ಕಾಯಕಲ್ಪ ನೀಡಿ ಕಲುಷಿತ ನೀರು ಬರದಂತೆ ತಡಯಬೇಕೆಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.

ಕೆರೆ ವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳು ಬರುತ್ತವೆ. ಎಲ್ಲಾ ಗ್ರಾಮಗಳಲ್ಲೂ ಅಂತರ್ಜಲ ಕಲುಷಿತವಾಗಿದೆ. ಮುತ್ತಾನಲ್ಲೂರು ಕೆರೆ ನೀರನ್ನು ಮುಟ್ಟಿದ ಜನರಲ್ಲಿ ಚರ್ಮ ರೋಗಗಳು ಕಾಣಿಸಿಕೊಂಡಿವೆ. ಹಾಗಾಗಿ ಜನರು ಕೆರೆಯೆಂದರೆ ದೂರು ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತ ತಿಳಿಸಿದರು.

ಕೆರೆ ರಕ್ಷಿಸಲು ಹೋರಾಟ: ಪುರಾತನ ಕೆರೆಯನ್ನು ಸಂರಕ್ಷಿಸಿ ಜನರ ಬಳಕೆಗೆ ಮುಕ್ತವಾಗುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಚಿನ್ಮಯ ಸೇವಾ ಸಂಸ್ಥೆಯ ಅಧ್ಯಕ್ಷ ಡಾ.ಚಿನ್ನಪ್ಪ.ವೈ.ಚಿಕ್ಕಹಾಗಡೆ ಅವರ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದರು.

ಶುಕ್ರವಾರ ರಾಜಭವನದವರೆಗೂ ಗ್ರಾಮಸ್ಥರು, ಮಹಿಳೆಯರು ತೆರಳಿ ಮನವಿ ಪತ್ರ ಸಲ್ಲಿಸಿದ್ದಾರೆ. ಮುತ್ತಾನಲ್ಲೂರಿಗೆ ಕಲುಷಿತ ನೀರು ಬರದಂತೆ ತಡೆಯಬೇಕು. ಚಂದಾಪುರದ ಪುರಸಭೆ ವ್ಯಾಪ್ತಿಯಿಂದ ಸಂಸ್ಕರಿಸದ ನೀರನ್ನು ಕೆರೆಗೆ ಬಿಡುವುದನ್ನು ತಡೆಯಬೇಕು ಮತ್ತು ಕೆರೆಯನ್ನು ಸಂರಕ್ಷಿಸಿ ಸಾರ್ವಜನಿಕರ ಬಳಕೆಗೆ ಉಪಯುಕ್ತವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.