ADVERTISEMENT

ಸದಸ್ಯತ್ವ ರದ್ದು ಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 4:58 IST
Last Updated 4 ಫೆಬ್ರುವರಿ 2026, 4:58 IST

ವಿಜಯಪುರ (ದೇವನಹಳ್ಳಿ): ಪುರಸಭೆ ಸದಸ್ಯ ಎ.ಆರ್.ಹನೀಫುಲ್ಲಾ ಅವರಿಗೆ ಸರ್ಕಾರ ನೀಡಿರುವ ಪಂಚ ಗ್ಯಾರಂಟಿ ಯೋಜನೆ ಮತ್ತು ಪ್ರಧಾನಮಂತ್ರಿಗಳ 15 ಅಂಶಗಳ ಯೋಜನೆಯ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ವಿಜಯಪುರ ಪುರಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪವನ್ ಜೋಶಿ, ಮಂಜುನಾಥ್, ಬೂಸ ಕೃಷ್ಣ ಅವರ ಸಾವಿಗೆ ಸದಸ್ಯ ಹನೀಫುಲ್ಲಾ ಕಿರುಕುಳ ಕಾರಣವಾಗಿದ್ದು, ಈವರೆಗೆ ಮೃತ ಕುಟುಂಬಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು.

ಪವನ್ ಜೋಶಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಸಹಿ ಹಾಕಿದ ಸಾದತ್ ಪಾಷಾ ಮೇಲೆ ಇತ್ತೀಚೆಗೆ ಪುರಸಭೆಯ ಆವರಣದಲ್ಲಿಯೆ ಸದಸ್ಯ ಹನೀಫುಲ್ಲಾ ಮತ್ತು ತಮ್ಮ ಹಮೀದ್ ಹಲ್ಲೆ ನಡೆಸಿದರು. ಅವರ ವಿರುದ್ಧ ಪೊಲೀಸ್ ದೂರು ದಾಖಲಾದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಹನೀಫುಲ್ಲಾ ಅವರು ತಮ್ಮ ಸ್ವಾರ್ಥಕ್ಕಾಗಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂತವರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ಗೆ ಉಳಿಗಾಲವಿಲ್ಲ ಎಂದರು.

ADVERTISEMENT

ಈ ಕೂಡಲೇ ಹನೀಫುಲ್ಲಾಗೆ ಸರ್ಕಾರದಿಂದ ನೀಡಿರುವ ಎಲ್ಲ ಜವಾಬ್ದಾರಿಗಳನ್ನು15 ದಿನದಲ್ಲಿ  ಹಿಂಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪುರಸಭೆ ಎದುರು ತಮಟೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.