ದೇವನಹಳ್ಳಿ: ತಾಲ್ಲೂಕಿನ ಕೊಯಿರಾ ಗ್ರಾಮದಲ್ಲಿರುವ ಮದ್ಯದಂಗಡಿಯ ಪರವಾನಗಿ ರದ್ದುಗೊಳಿಸಬೇಕೆಂದು ಜಾಂಬವ ಯುವಸೇನಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕರೀಗೌಡರಿಗೆ ಮನವಿ ಸಲ್ಲಿಸಿದರು.
ಜಾಂಬವ ಯುವಸೇನಾ ತಾಲ್ಲೂಕು ಘಟಕ ಉಪಾಧ್ಯಕ್ಷ ಎಚ್. ಮುನಿಕೃಷ್ಣ ಮಾತನಾಡಿ, ಕೊಯಿರಾ ಪರಿಶಿಷ್ಟರ ಕಾಲೊನಿಯಲ್ಲಿ ಒಂದೂವರೆ ಸಾವಿರಕ್ಕಿಂತ ಹೆಚ್ಚು ದಲಿತರು, ಕೂಲಿ ಕಾರ್ಮಿಕರು ಇದ್ದಾರೆ. ಬಹುತೇಕ ದಲಿತರು ಕಾಲೊನಿ ಪಕ್ಕದಲ್ಲಿರುವ ಮದ್ಯದಂಗಡಿಗೆ ನಿತ್ಯದ ದುಡಿಮೆಯ ಹಣ ಹಾಕುತ್ತಿದ್ದಾರೆ. ವಿವಿಧ ಗ್ರಾಮಗಳಲ್ಲಿರುವ ಚಿಲ್ಲರೆ ಅಂಗಡಿಗಳಲ್ಲಿ ಬೆಳಗಿನ ಜಾವದಿಂದ ತಡರಾತ್ರಿಯವರೆಗೆ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಅದರ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಜಾಂಬವ ಯುವಸೇನಾ ಸಂಸ್ಥಾಪಕ ರಾಜ್ಯ ಘಟಕ ಅಧ್ಯಕ್ಷ ರಮೇಶ್ ಚಕ್ರವರ್ತಿ ಮಾತನಾಡಿ, ‘ಮದ್ಯದಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಮದ್ಯವ್ಯಸನಿಗಳಾಗಲು ಸರ್ಕಾರವೇ ಪರೋಕ್ಷ ಬೆಂಬಲ ನೀಡುತ್ತಿದೆ. ಮದ್ಯದ ಅಮಲಿನಲ್ಲಿ ಪರಸ್ಪರ ಗಲಾಟೆ, ಹೊಡೆದಾಟ ಹೆಚ್ಚುತ್ತಿದೆ’ಎಂದು ದೂರಿದರು. ಮುಖಂಡ ಸುಬ್ರಮಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.