
ಹೆಬ್ಬಗೋಡಿ(ಆನೇಕಲ್): ಬೇಸಿಗೆ ಸಮೀಪಿಸುತ್ತಿದ್ದು, ಆನೇಕಲ್ ತಾಲ್ಲೂಕಿನಲ್ಲಿ ಯಾವುದೇ ಜಲಮೂಲಗಳಿಲ್ಲ. ಹಾಗಾಗಿ ವಿಧಾನಸಭಾ ಕ್ಷೇತ್ರದೆಲ್ಲೆಡೆ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.
ಹೆಬ್ಬಗೋಡಿ ನಗರಸಭೆಯ 15ನೇ ವಾರ್ಡ್ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಶುದ್ಧ ನೀರನ್ನು ಕುಡಿಯುವುದರಿಂದ ಹಲವು ರೋಗಗಳಿಂದ ದೂರ ಇರಬಹುದು. ಹಾಗಾಗಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ. ಉತ್ತಮ ನಿರ್ವಹಣೆ ಮಾಡುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದರು.
ಹೆಬ್ಬಗೋಡಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ತಾಲ್ಲೂಕಿನ ಐದು ಕೈಗಾರಿಕ ಪ್ರದೇಶಗಳಿಗೆ ಸಮೀಪದಲ್ಲಿದೆ. ಹಾಗಾಗಿಯೇ ಜನಸಂಖ್ಯೆ ಹೆಚ್ಚಿದ್ದು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತಿ ವಾರ್ಡ್ನಲ್ಲಿಯೂ ಘಟಕ ಸ್ಥಾಪಿಸಲು ಪೌರಾಯುಕ್ತರಿಗೆ ಸೂಚಿಸಲಾಗಿದೆ. ಸರ್ಕಾರಿ ಜಾಗಗಳನ್ನು ಗುರುತಿಸಿ ಕಂಪನಿಗಳ ನೆರವು ಮತ್ತು ನಗರಸಭೆಯ ಅನುದಾನದಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದರು.
ಹೆಬ್ಬಗೋಡಿ ನಗರಸಭೆ ಅಧ್ಯಕ್ಷ ಸುಜಾತ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಜಯರಾಮ್, ಪೌರಾಯುಕ್ತ ರಾಜೇಂದ್ರ, ಸದಸ್ಯರಾದ ಸುನಂದಾ ವೆಂಕಟೇಶ್, ಮಂಜುನಾಥರೆಡ್ಡಿ, ಕಬಡ್ಡಿ ಮಂಜು, ಅರುಣ್ ಕುಮಾರ್, ಜ್ಯೋತಿ ಕೃಷ್ಣ, ಲಕ್ಷ್ಮೀನಾರಾಯಣ್, ಶರಣ್ಯ ಪ್ರಕಾಶ್, ಮುಖಂಡರಾದ ಶ್ರೀರಾಮರೆಡ್ಡಿ, ಮುನಿಕೃಷ್ಣ, ಮುರಳಿ, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.