ದೇವನಹಳ್ಳಿ: ‘ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆ ಬಂದು ಹೋಗಿದೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ನಿಂತುಕೊಳ್ಳುತ್ತದೆ’ ಎಂದು ಬೈಯಪಾ ಮಾಜಿ ಅಧ್ಯಕ್ಷ ಅಶ್ವಥನಾರಾಯಣ ತಿಳಿಸಿದರು.
ಇಲ್ಲಿನ ಎಸ್ಎಲ್ಎನ್ ಮೈದಾನದಲ್ಲಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿ, ತಾಲ್ಲೂಕಿನಲ್ಲಿ ಬಿಜೆಪಿ ಸದ್ಯಕ್ಷೆ ಅಧ್ವಾನ ಆಗಿದೆ. ವಿಧಾನಸಭಾ ಚುನಾವಣೆಯಲ್ಲಿ ಮುಖಂಡರೊಂದಿಗೆ ಚರ್ಚಿಸದೆ ಅಭ್ಯರ್ಥಿ ಆಯ್ಕೆ ಮಾಡಿದ್ದು, ಅನೇಕ ಮುಖಂಡರು ಬಿಜೆಪಿ ತೊರೆದಿದ್ದು ಇದಕ್ಕೆ ಮುಖ್ಯ ಕಾರಣ’ ಎಂದರು.
‘ಐದು ವರ್ಷಕ್ಕೊಮ್ಮೆ ಬರುತ್ತಾರೆ. ಸುಳ್ಳು ಹೇಳಿ ಮತ ಗಿಟ್ಟಿಸಿಕೊಂಡು ಹೋಗುತ್ತಾರೆ. ಎತ್ತಿನಹೊಳೆ ಯೋಜನೆಗೆ ₹4 ಸಾವಿರ ಕೊಟ್ಟಿದ್ದು ಯಾರು? ಬೆಂಗಳೂರಿನಿಂದ ಕೊಳಕು ನೀರು ಈ ಭಾಗಕ್ಕೆ ತರಲು ನೂರಾರು ಕೋಟಿ ವೆಚ್ಚ ಎಂದರೆ ಹೇಗೆ’ ಎಂದು ಪರೋಕ್ಷವಾಗಿ ಸಂಸದ ಎಂ.ವೀರಪ್ಪ ಮೊಯಿಲಿ ವಿರುದ್ಧ ಹರಿಹಾಯ್ದರು.
‘ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಆದ ಅಭಿವೃದ್ಧಿ ಕೆಲಸಗಳಷ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಮಾಡಿಲ್ಲ. ಪ್ರಧಾನಿ ಮೋದಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಯಲ್ಲಿ ಅವರೊಬ್ಬ ಪ್ರಶ್ನಾತೀತ ನಾಯಕ’ ಎಂದರು.
ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ರಾಜಣ್ಣ ಮಾತನಾಡಿ, ಮೋದಿಯವರೇ ದೇಶದ ಮುಂದಿನ ಪ್ರಧಾನ ಮಂತ್ರಿ ಆಗುತ್ತಾರೆ; ಅನುಮಾನವೇ ಬೇಡ. ವಿರೋಧ ಪಕ್ಷಗಳ ಘಟಬಂಧನ್ ಬಿಜೆಪಿಗೆ ಸಾಟಿಯೇ ಅಲ್ಲ. ಲೋಕಸಭೆ ಚುನಾವಣೆಗಿಂತ ಮೊದಲು ನಡೆಯುವ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು. ಕಾರ್ಯಕರ್ತರು ಆತ್ಮಸಾಕ್ಷಿಯಾಗಿ ಕೆಲಸ ಮಾಡಿದರೆ ಎಲ್ಲ ಚುನಾವಣೆಗಳಲ್ಲಿ ಗೆಲುವು ಸುಲಭವಾಗಲಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಸ್ತುವಾರಿ ಹಾಗೂ ಯಲಹಂಕ ಶಾಸಕ ವಿಶ್ವನಾಥ್ ಮಾತನಾಡಿ, ಲೋಕಸಭೆ ಚುನಾವಣೆಗೆ ಕೇವಲ ಎರಡೂವರೆ ತಿಂಗಳು ಇದೆ. ಎಂಟು ವಿಧಾನಸಭಾ ಕ್ಷೇತ್ರ ಹೊಂದಿರುವಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಂದು ಬಾರಿ 37 ಸಾವಿರ ಮತ್ತು ಕಳೆದ ಬಾರಿ 9,300 ಮತಗಳಿಂದ ಬಿಜೆಪಿ ಸೋತಿದೆ. ಜೆಡಿಎಸ್ 3ನೇ ಸ್ಥಾನಕ್ಕೆ ಕುಸಿದಿತ್ತು. ಲೋಕಸಭಾ ಚುನಾವಣೆ ಬೇರೆ ವಿಧಾನಸಭೆ ಚುನಾವಣೆ ಬೇರೆ, ಈ ಬಾರಿಯೂ ಬಚ್ಚೇಗೌಡರೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಗುರುಸ್ವಾಮಿ, ರಾಜ್ಯ ಪರಿಷತ್ ಸದಸ್ಯ ದೇ.ಸು. ನಾಗರಾಜ್, ಜಿಲ್ಲಾ ಬಿಜೆಪಿ ಘಟಕ ಉಪಾಧ್ಯಕ್ಷ ಎಚ್.ಎಂ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಅಂಬರೀಷ್ಗೌಡ, ಕಾರ್ಯದರ್ಶಿ ರಮೇಶ್ ಬಾಬು, ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗರಾಜ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್, ಸೋಣ್ಣೆಗೌಡ, ಮುಖಂಡರಾದ ರಾಜ್ ಗೋಪಾಲ್, ಹನುಮಂತರಾಯಪ್ಪ, ಆನಂದ್ಗೌಡ, ಬಿಜೆಪಿ ನಗರ ಘಟಕ ಅಧ್ಯಕ್ಷ ನಿಲೇರಿ ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.