ಆನೇಕಲ್: ತಾಲ್ಲೂಕಿನ ದ್ಯಾವಸಂದ್ರದಲ್ಲಿ ಭಕ್ತಿ ಮುನೇಶ್ವರ ಸ್ವಾಮಿ ಹಾಗೂ ವರುಣ ಕೊಂಡ ಮತ್ತು ಪರುವು ಸೋಮವಾರ ಶ್ರದ್ಧಾ, ಭಕ್ತಿಯಿಂದ ಸೋಮವಾರ ನಡೆಯಿತು. ದ್ಯಾವಸಂದ್ರ, ನೊಸೇನೂರು, ಬೊಮ್ಮಂಡಹಳ್ಳಿ ಗ್ರಾಮಗಳ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.
ಅಗ್ನಿಕೊಂಡ ಮತ್ತು ಪರವು ಅಂಗವಾಗಿ ಮುನೇಶ್ವರ ಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಗ್ರಾಮದಲ್ಲಿ ಭಕ್ತಿ ಮುನೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಭಕ್ತರು ಉತ್ಸವ ಮೂರ್ತಿಯನ್ನು ಹೊತ್ತು ಹೊಳೆ ಮೆಟ್ಟಿಸಿದರು.
ವೀರಗಾಸೆಯೊಂದಿಗೆ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ನಿಕೊಂಡದ ಬಳಿಗೆ ಬರುತ್ತಿದ್ದಂತೆಯೇ ನೆರೆದಿದ್ದ ಜನರು ಭಕ್ತಿ ಮುನೇಶ್ವರ ಮತ್ತು ವರುಣ ದೇವರ ಜಯಘೋಷ ಮಾಡಿದರು. ದೇವಾಲಯದ ಅರ್ಚಕ ಬಿ.ಚಂದ್ರಶೇಖರ್ ಅಗ್ನಿಕೊಂಡಕ್ಕೆ ಪೂಜೆ ಸಲ್ಲಿಸಿ ಕೊಂಡವನ್ನು ಹಾಯುತ್ತಿದ್ದಂತೆ ಗ್ರಾಮಸ್ಥರು ಅಗ್ನಿಕೊಂಡವನ್ನು ಪ್ರವೇಶಿಸಿದರು.
ಅಗ್ನಿಕೊಂಡ ಪ್ರವೇಶದ ನಂತರ ಪರುವು ನಡೆಯಿತು. ಪರುವಿನಲ್ಲಿ ಭಕ್ತರು ಸಾಮೂಹಿಕ ದಾಸೋಹ ನಡೆಯಿತು. ನೂರಾರು ಭಕ್ತರು ದೇವಾಲಯದ ಮುಂಭಾಗದ ಮೈದಾನದಲ್ಲಿ ಕುಳಿತು ಪ್ರಸಾದ ಸೇವಿಸಿದರು. ಕಲಾವಿದರು ಆಕರ್ಷಕ ವೀರಗಾಸೆ ಕಲಾಪ್ರದರ್ಶನ ನೀಡಿದರು. ಭಕ್ತರು ಮುನೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾ ಶಿವಕುಮಾರ್, ಮುಖಂಡರಾದ ಕೆ.ಎಸ್.ನಟರಾಜ್, ರಾಜಶೇಖರರೆಡ್ಡಿ, ಹಾ.ವೇ.ವೆಂಕಟೇಶ್, ಎನ್.ಎಸ್.ರವಿಚಂದ್ರ, ಎನ್.ಕೃಷ್ಣಾರೆಡ್ಡಿ, ಬಿ.ಮಂಜುನಾಥರೆಡ್ಡಿ, ಪ್ರಭಾಕರ್ ಬಾಬು, ಮಂಜುನಾಥ್, ರೇಣುಕಾಪ್ರಸಾದ್, ವೆಂಕಟರಮಣಪ್ಪ, ಡಿ.ಎಲ್.ಚಂದ್ರಶೇಖರ ಶಾಸ್ತ್ರೀ, ಬಡಕಪ್ಪ, ಅಂಬಿಕಾ ನರೇಂದ್ರ, ನಾರಾಯಣಪ್ಪ, ಬೊಮ್ಮಂಡನಹಳ್ಳಿ ಸೀನಪ್ಪ, ಎಸ್.ಕಿರಣ್, ಮಾದಯ್ಯರೆಡ್ಡಿ, ಪಟೇಲ್ ಮಂಜುನಾಥರೆಡ್ಡಿ, ದೊಡ್ಡ ಸಂಪಂಗಿ, ಶ್ರೀಕಂಠಯ್ಯ, ನೊಸೇನೂರು ಮಹದೇವಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.