ದೇವನಹಳ್ಳಿ: ಆತ್ಮತೃಪ್ತಿಗಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಸಲ್ಲದು ಎಂದು ಜಯಕರ್ನಾಟಕ ಸಂಘಟನೆ ಬೆಂಗಳೂರು ನಗರ ಜಿಲ್ಲಾ ಘಟಕ ಅಧ್ಯಕ್ಷ ಜಗದೀಶ್ ಗೌಡ ಖಂಡಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಯಾರೋ ಒಂದಿಬ್ಬರು ಟ್ವೀಟರ್, ವಾಟ್ಸ್ ಆ್ಯಪ್ಗಳಲ್ಲಿ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪರೈ ವಿರುದ್ಧ ವಿವಿಧ ರೀತಿಯಲ್ಲಿ ಬಣ್ಣಕಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಯಾವುದೇ ಪುರಾವೆಗಳಿಲ್ಲದೆ ದೂರುವುದು, ಆರೋಪ ಮಾಡುವುದು ಮತ್ತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅಂಥವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ’ ಎಂದರು.
ಸಂಘಟನೆ ಸ್ಥಾಪನೆಯಾದ ನಂತರ ಈವರೆಗೆ ನಾಡಿನ ನೆಲ, ಜಲ, ಭಾಷೆಗಾಗಿ ಲಕ್ಷಾಂತರ ಕಾರ್ಯಕರ್ತರು, ನೂರಾರು ಪದಾಧಿಕಾರಿಗಳು ಜೊತೆಗೂಡಿ ಹೋರಾಟ ನಡೆಸಲಾಗಿದೆ. ಹಲ್ಮಿಡಿ ಶಾಸನದ ಪ್ರವೇಶ ಮುಖ್ಯದ್ವಾರದ ಕೊಡುಗೆ ಯಾರದ್ದು, ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಆಟೊಗಳು, ಸಮುದಾಯ ಭವನಗಳು ನಿರ್ಮಾಣದ ಕೊಡುಗೆಗಳನ್ನು ವಿರೋಧಿಗಳು ಎಣಿಕೆ ಮಾಡಲಿ ಎಂದು ಹೇಳಿದರು.
‘ಸಂಸ್ಥಾಪಕ ಅಧ್ಯಕ್ಷರ ನೈತಿಕ ಬಲವನ್ನು ಕುಗ್ಗಿಸಲು ಇಲ್ಲಸಲ್ಲದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸುವುದು ನಿಲ್ಲಿಸಬೇಕು, ಸಂಘಟನೆ ಬಲಿಷ್ಠವಾಗಿದೆ. ಈವರೆಗೆ ಯಾವುದೇ ಕಪ್ಪುಚುಕ್ಕಿ ಸಂಘಟನೆಯ ಮೇಲೆ ಇಲ್ಲ, ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದರು.
ಸಂಘಟನೆಯ ಗ್ರಾಮಾಂತರ ಜಿಲ್ಲಾ ಘಟಕ ಅಧ್ಯಕ್ಷ ಟಿ.ರವಿ, ಪ್ರಧಾನ ಕಾರ್ಯದರ್ಶಿ ಎನ್.ವಿಜಯಕುಮಾರ್, ಕಾರ್ಯದರ್ಶಿ ರವಿಕುಮಾರ್, ತಾಲ್ಲೂಕು ಘಟಕ ಅಧ್ಯಕ್ಷ ಚೇತನ್ ಗೌಡ, ಚನ್ನರಾಯ ಪಟ್ಟಣ ಹೋಬಳಿ ಘಟಕ ಅಧ್ಯಕ್ಷ ದೇವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.