ADVERTISEMENT

ಓಂಕಾರೇಶ್ವರ ಸ್ವಾಮಿ ರಥೋತ್ಸವ

ಸರಳ ಆಚರಣೆಗೆ ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 7:29 IST
Last Updated 1 ಏಪ್ರಿಲ್ 2021, 7:29 IST
ವಿಜಯಪುರದ ಓಂಕಾರೇಶ್ವರಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಬ್ರಹ್ಮ ರಥೋತ್ಸವಕ್ಕೆ ನಂಜಾವಧೂತ ಸ್ವಾಮೀಜಿ ಚಾಲನೆ ನೀಡಿದರು
ವಿಜಯಪುರದ ಓಂಕಾರೇಶ್ವರಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಬ್ರಹ್ಮ ರಥೋತ್ಸವಕ್ಕೆ ನಂಜಾವಧೂತ ಸ್ವಾಮೀಜಿ ಚಾಲನೆ ನೀಡಿದರು   

ವಿಜಯಪುರ: ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣ, ಇತಿಹಾಸ ಪ್ರಸಿದ್ಧ ಓಂಕಾರೇಶ್ಪರಸ್ವಾಮಿ ಕಲ್ಲುಗಾಲಿ ಬ್ರಹ್ಮರಥೋತ್ಸವ ಸರಳವಾಗಿ ನೆರವೇರಿತು.

ಗುರಪ್ಪನಮಠದ ಓಂಕಾರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬ್ರಹ್ಮರಥೋತ್ಸವಕ್ಕೆ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡಬ್ರಹ್ಮೇಶ್ವರಸ್ವಾಮಿ ಸಂಸ್ಥಾನ ಮಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಚಾಲನೆ ನೀಡಿದರು.

ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ರಥಕ್ಕೆ ಬಾಳೇಹಣ್ಣು ದವನಗಳನ್ನು ಎಸೆದು, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಭಕ್ತಿಭಾವದಿಂದ ಹರಕೆ ಮಾಡಿಕೊಂಡರು, ಭಕ್ತರು ರಥವನ್ನು ಎಳೆದ ತಕ್ಷಣ ಮಂಗಳ ವಾದ್ಯಗಳು ಮೊಳಗಿದವು.

ADVERTISEMENT

ನಂಜಾವಧೂತ ಸ್ವಾಮೀಜಿ ಮಾತನಾಡಿ, ಸುಮಾರು 251 ವರ್ಷಗಳ ಹಿಂದೆ ಸ್ಥಾಪನೆಗೊಂಡ ಗುರಪ್ಪನಮಠ ಹಾಗೂ ಶಿರಾ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿಗಳ ಮಠ, ಎರಡೂ ಕೂಡ ಅವಧೂತ ಪರಂಪರೆಯಲ್ಲಿ ಬಂದಿದ್ದು, ಎರಡೂ ಮಠಗಳು ಜನರಲ್ಲಿ ಸಾಮಾಜಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಜ್ಞಾನವಂತರನ್ನು ಮಾಡುವತ್ತ ಶ್ರಮಿಸುತ್ತಿವೆ ಎಂದು ಹೇಳಿದರು.

ಮೊದಲೇ ನಿಗದಿ ಪಡಿಸಿದ್ದ ಬ್ರಹ್ಮರಥೋತ್ಸವವನ್ನು ಸರಳವಾಗಿ ನಡೆಸಿದ್ದು, ಗುರಪ್ಪನಮಠದ ಇತಿಹಾಸದಲ್ಲಿಯೇ ಇಷ್ಟು ಸರಳವಾಗಿ ರಥೋತ್ಸವ ನಡೆದದ್ದು ಇದೇ ಮೊದಲ ಬಾರಿಯಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಭಕ್ತರ ಸಹಕಾರವೂ ಕೂಡಾ ಬೇಕಾಗಿದೆ ಎಂದು ತಿಳಿಸಿದರು.

ದೇಶಕ್ಕೆ ಹಾಲು, ಹಣ್ಣು ತರಕಾರಿಗಳನ್ನು ಪೂರೈಸಿದ ಕೀರ್ತಿ ರೈತರಿಗೆ ಸಲ್ಲುತ್ತದೆ. ಜನರ ಜೀವನದ ಜೊತೆಗೆ ಚೆಲ್ಲಾಟವಾಡಬಾರದು. ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಯೋಜನೆಯಡಿ ಹರಿಯುತ್ತಿರುವ ನೀರು ಎಷ್ಟರ ಮಟ್ಟಿಗೆ ಒಳ್ಳೆಯದು ಎನ್ನುವುದು ಪರಿಶೀಲನೆ ನಡೆಸಬೇಕು ಎಂದುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.