ಆನೇಕಲ್: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಮುಖ್ಯದ್ವಾರದಲ್ಲಿ ಉದ್ಯಾನ, ಸಿಗ್ನಲ್ಲೈಟ್ ಮತ್ತು ಪಾದಾಚಾರಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅಂದಾಜು ₹ 60ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದು ಬೊಮ್ಮಸಂದ್ರ ಕೈಗಾರಿಕ ಮಾಲೀಕರ ಸಂಘದ ಅಧ್ಯಕ್ಷ ಎ.ಪ್ರಸಾದ್ ತಿಳಿಸಿದರು.
ಅವರು ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕ ಪ್ರದೇಶದಲ್ಲಿನ ಉದ್ಯಾನವನ ಕಾಮಗಾರಿಯಯನ್ನು ಪದಾಧಿಕಾರಿಗಳೊಂದಿಗೆ ಪರಿಶೀಲಿಸಿ ಮಾತನಾಡಿದರು.
‘ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಮುಖ್ಯದ್ವಾರದ ಮೇಲ್ಸುತುವೆ ಸಮೀಪದಲ್ಲಿ ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ಹಾಕುವ ಮೂಲಕ ಪ್ರದೇಶದ ಅಂದ ಕೆಡಿಸಲಾಗಿತ್ತು. ಹಾಗಾಗಿ ಕೈಗಾರಿಕಾ ಮಾಲೀಕರ ಸಂಘವು ಇದಕ್ಕೊಂದು ಸುಂದರ ರೂಪ ನೀಡುವ ಸಲುವಾಗಿ ಸಂಘದ ವತಿಯಿಂದ ಪಾರ್ಕ್, ಪಾದಚಾರಿ ರಸ್ತೆ, ಸಿಗ್ನಲ್ ಲೈಟ್ ಅಳವಡಿಸಿ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ’ ಎಂದರು.
‘ಮುಂಬರುವ ದಿನಗಳಲ್ಲಿ ಬೊಮ್ಮಸಂದ್ರ(ಕಿತ್ತಗಾನಹಳ್ಳಿ) ಕೆರೆಯನ್ನು ಸುಮಾರು 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಪ್ರಭಾವ ಕಡಿಮೆಯಾದ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು’ ಎಂದರು.
ಬೊಮ್ಮಸಂದ್ರ ಕೈಗಾರಿಕ ಮಾಲೀಕರ ಸಂಘದ ಕಾರ್ಯದರ್ಶಿ ಆರ್.ನರೇಂದ್ರಕುಮಾರ್, ಖಜಾಂಚಿ ಸಂಜೀವ್ ಸಾವಂತ್, ಜಂಟಿ ಕಾರ್ಯದರ್ಶಿ ಮುರಳಿ, ಪದಾಧಿಕಾರಿಗಳಾದ ಮಲ್ಲಿಕಾರ್ಜುನಪ್ಪ, ನಾಗರಾಜಶೆಟ್ಟಿ, ಪುರಸಭಾ ಸದಸ್ಯ ಗೋಪಾಲ್, ಮುಖಂಡರಾದ ಮುರುಗೇಶ್, ನವೀನ್, ವ್ಯವಸ್ಥಾಪಕ ಶಿವಕುಮಾರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.