ADVERTISEMENT

ವಿಜಯಪುರ | ಚೆಕ್ ಪೋಸ್ಟ್: ಸಿಬ್ಬಂದಿ ಹೆಚ್ಚಳಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 14:02 IST
Last Updated 22 ಮಾರ್ಚ್ 2024, 14:02 IST
ವಿಜಯಪುರ ಹೋಬಳಿ ವೆಂಕಟಗಿರಿಕೋಟೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಸಿಬ್ಬಂದಿ
ವಿಜಯಪುರ ಹೋಬಳಿ ವೆಂಕಟಗಿರಿಕೋಟೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಸಿಬ್ಬಂದಿ   

ವಿಜಯಪುರ(ದೇವನಹಳ್ಳಿ): ಹೋಬಳಿಯ ವೆಂಕಟಗಿರಿಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚುನಾವಣೆಯ ಅಕ್ರಮಗಳ ತಡೆಗೆ ತೆರೆದಿರುವ ತಪಾಸಣಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ತ್ವರಿತವಾಗಿ ತಪಾಸಣೆ ನಡೆಯುತ್ತಿಲ್ಲ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದ್ದು, ಸಿಬ್ಬಂದಿ ಹೆಚ್ಚಿಸಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

ನೆರೆಯ ಆಂಧ್ರಪ್ರದೇಶದಿಂದ ಬೆಂಗಳೂರಿನ ಕಡೆಗೆ ಸಂಚರಿಸುವ ಮುಖ್ಯ ಹೆದ್ದಾರಿ ಇದಾಗಿದ್ದು, ದಿನಕ್ಕೆ ಸಾವಿರಾರು ವಾಹನಗಳು ಸಂಚಾರಿಸುತ್ತವೆ. ಇಲ್ಲಿನ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಲು ಇಬ್ಬರು ತಪಾಸಣಾಧಿಕಾರಿ, ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ ಹಾಗೂ ಒಬ್ಬ ಗೃಹ ರಕ್ಷಕದಳದ ಮಹಿಳಾ ಸಿಬ್ಬಂದಿ ನಿಯೋಜಿಸಲಾಗಿದೆ.

ಹೆದ್ದಾರಿಯಲ್ಲಿ ಬರುವ ವಾಹನಗಳ ದಟ್ಟಣೆಯಿಂದಾಗಿ ಅಷ್ಟು ವಾಹನಗಳನ್ನು ತಪಾಸಣೆ ಮಾಡಲು ಸಾಧ್ಯವಾಗದೆ ಸಿಬ್ಬಂದಿ ಪರದಾಡುವಂತಾಗಿದೆ. ಒಂದು ವಾಹನ ನಿಲ್ಲಿಸಿದರೆ ಕನಿಷ್ಠ ಐದು ನಿಮಿಷ ತಪಾಸಣೆ ಮಾಡಬೇಕು. ಈ ವೇಳೆ ಹಿಂದಿನ ವಾಹನ ಸವಾರರು, ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ರಾತ್ರಿ ವೇಳೆ ಅಪಾಯ: ‘ಕೆಲವು ವಾಹನ ಸವಾರರು ರಾತ್ರಿಯ ವೇಳೆ ತಮ್ಮ ವಾಹನ ನಿಲ್ಲಿಸುವುದಿಲ್ಲ. ನಾವು ಕೈ ಅಡ್ಡ ಹಾಕಿದರೂ ನಮ್ಮ ಮೇಲೆ ಬರುವಂತೆ ಬರುತ್ತಾರೆ. ಹಲವು ಬಾರಿ ಇಂತಹ ಅಪಾಯಗಳಿಂದ ತಪ್ಪಿಸಿಕೊಂಡು ಪಕ್ಕಕ್ಕೆ ಬಂದಿದ್ದೇವೆ’ ಎಂದು ಇಲ್ಲಿನ ಸಿಬ್ಬಂದಿ ಆತಂಕ ವ್ಯಕ್ತಪಡಿಸುತ್ತಾರೆ.

ಒಂದು ವಾಹನ ತಪಾಸಣೆ ನಡೆಸುವಷ್ಟರಲ್ಲಿ 10 ವಾಹನಗಳು ಮುಂದೆ ಹೋಗಿರುತ್ತವೆ. ಇಲ್ಲಿಗೆ ಇನ್ನೂ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಬೇಕು. ಅದರ ಜೊತೆಗೆ ನಮಗೆ ಸುರಕ್ಷತಾ ಪರಿಕರ ಒದಗಿಸಬೇಕು. ಇಲ್ಲಿ ನಮಗೆ ಸುರಕ್ಷತೆಯ ಭಾವನೆಯಿಲ್ಲದಂತಾಗಿದ್ದು, ಯಾವ ಸಮಯದಲ್ಲಿ ಏನಾಗುತ್ತದೋ ಎನ್ನುವ ಭಯ ಕಾಡುತ್ತಿದೆ ಎಂದು ಸಿಬ್ಬಂದಿ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.