ದೊಡ್ಡಬಳ್ಳಾಪುರ: ಕಾಲಕ್ಕೆ ತಕ್ಕಂತೆ ಸೈಬರ್ ಅಪರಾಧವು ಬದಲಾಗುತ್ತಿದೆ. ಸೈಬರ್ ತಂತ್ರವು ಬದಲಾಗುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕೆಂದು ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಬಿ.ನವೀನ್ಕುಮಾರ್ ಹೇಳಿದರು.
ನಗರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಇಸಿಇ ಸಭಾಂಗಣದಲ್ಲಿ ಗುರುವಾರ ನಡೆದ ಸಿಎಸ್ಇ ಮತ್ತು ದತ್ತಾಂಶ ವಿಜ್ಞಾನ ವಿಭಾಗದಲ್ಲಿ’ಅಟಲ್-ವಾಣಿ ಎಐಸಿಟಿಇ ಪ್ರಾಯೋಜಿತ ಸೈಬರ್ ಭದ್ರತೆ ಮತ್ತು ಸುರಕ್ಷತಾ ವ್ಯವಸ್ಥೆ’ ಕುರಿತ ಮೂರು ದಿನಗಳ ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಗತ ತೇಜೋವಧೆ, ಹಣ ವಂಚನೆ, ಮಾನಹಾನಿ, ಬೆದರಿಕೆ, ಸಾಮಾಜಿಕ ಭದ್ರತೆಗೆ ಧಕ್ಕೆ ತರುವ ಪ್ರಯತ್ನಗಳು, ದೊಡ್ಡ ಮಟ್ಟದ ಸಾಫ್ಟ್ರ್ ಹ್ಯಾಕಿಂಗ್, ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿವೆ. ಯಾವ ಹಂತದಲ್ಲಿ ಯಾವ ರೀತಿ ಇಂತಹ ಕೃತ್ಯಗಳು ನಡೆಯುತ್ತವೆ ಎಂದು ಊಹಿಸುವುದೂ ಕಷ್ಟವಾಗುತ್ತಿದೆ. ಇಂತಹ ಪ್ರಮುಖ ವಿಚಾರವೊಂದರ ಬಗ್ಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು.
ಬಹು ಆಯಾಮಗಳಲ್ಲಿ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. ವೈವಿಧ್ಯಮಯ ಮಾದರಿಗಳಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿವೆ. ತಾಂತ್ರಿಕ ಕೌಶಲ ಬೆಳೆದಂತೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಸೈಬರ್ ವಂಚಕರು ಅತ್ಯಾಧುನಿಕ ಮಾದರಿಗಳಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಇಂತಹ ವಂಚನೆಗಳ ಬಗ್ಗೆ ಎಲ್ಲಾ ಹಂತಗಳಲ್ಲಿ ಸಾಮಾಜಿಕ ಜಾಗೃತಿ ಅಗತ್ಯವಾಗಿದೆ. ವಿದ್ಯಾವಂತ ಸಮುದಾಯವೂ ವಂಚನೆಗಳಿಗೆ ಒಳಗಾಗುತ್ತಿರುವುದು ಆತಂಕಕಾರಿಯಾಗಿದೆ ಎಂದರು.
ಶ್ರೀದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಗೌರ್ನಿಂಗ್ ಕೌನ್ಸಿಲ್ ಸದಸ್ಯ ಜೆ.ಆರ್.ರಾಕೇಶ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲ ಡಾ.ಕೆ.ಎಂ.ಶಿವಪ್ರಸಾದ್, ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಮೃತ್ಯುಂಜಯ, ಡಾ.ಆರ್.ಎಂ.ಸುನಿಲ್ಕುಮಾರ್, ಡಾ.ಬಿ.ಎನ್.ಮಂಜುನಾಥ್, ಡಾ.ಅಲ್ಲಾಬಕಾಶ್, ಸಂಪನ್ಮೂಲ ವ್ಯಕ್ತಿ ಗಜೇಂದ್ರ ದೇಶಪಾಂಡೆ, ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.