ವಿಜಯಪುರ: ಇಲ್ಲಿನ ಬಲಿಜಪೇಟೆಯಲ್ಲಿರುವ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಜ.5 ರಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಉತ್ತರದ್ವಾರ ಪ್ರವೇಶ, ವಿಶೇಷ ಅಲಂಕಾರ, ಸಪ್ತದ್ವಾರ ದರ್ಶನವನ್ನು ಹಮ್ಮಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಗಣ್ಯರಿಗೆ ಅಧಿಕೃತವಾಗಿ ಆಹ್ವಾನ ನೀಡಿದರು.
ಟೌನ್ ಬಲಿಜ ಸಂಘ ಮತ್ತು ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡ ನಿಯೋಗವು ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರನ್ನು ಗೃಹಕಚೇರಿಯಲ್ಲಿ ಭೇಟಿ ಮಾಡಿ ಆಹ್ವಾನ ನೀಡಿತು.
ನಿಯೋಗದಲ್ಲಿ ಅರ್ಚಕ ಲೋಕನಾಥಾಚಾರ್ಯ, ಟೌನ್ ಬಲಿಜ ಸಂಘದ ಅಧ್ಯಕ್ಷ ಟಿ.ಮಹಾತ್ಮಾಂಜನೇಯ, ಕಾರ್ಯದರ್ಶಿ ಮುನಿರಾಜು, ಮುಖಂಡ ಬಲಮುರಿ ಶ್ರೀನಿವಾಸ್, ವೇಣುಗೋಪಾಲ್, ವಿ.ನಾಗಯ್ಯ, ಪ್ರಕಾಶ್, ದೇವರಾಜು, ರಾಮಾಂಜಿನಪ್ಪ, ವೆಂಕಟೇಶ್ ಇದ್ದರು.
ವಿಶೇಷಪೂಜೆ: ವೈಕುಂಠ ಏಕಾದಶಿ ಅಂಗವಾಗಿ ಅಂದು ಬೆಳಿಗ್ಗೆ ವಿಶ್ವಕ್ಸೇನಪೂಜೆ, ಕಳಶಾರಾಧನೆ, ಹೋಮಾದಿ ಕಾರ್ಯಗಳು ನಡೆಯಲಿದ್ದು, 6 ರಂದು ಸಪ್ತದ್ವಾರ ಪೂಜೆ, ಮಹಾ ಮಂಗಳಾರತಿ, ಮಧ್ಯಾಹ್ನ 3 ಗಂಟೆಗೆ ದೇವಾಲಯದ ಮುಂಭಾಗದಲ್ಲಿ ರಂಗನಿರ್ದೇಶಕ ಎಂ.ವಿ.ನಾಯ್ಡು ತಂಡದವರಿಂದ ಭಕ್ತಿಗೀತೆಗಳ ಗಾಯನ, ನಾದಸ್ವರ ಕಚೇರಿ, ದೇವರ ವಿಶೇಷ ದರ್ಶನ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಂ ಸಾನ್ನಿಧ್ಯ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಉಪಸಭಾಪತಿ ಜೆ.ಕೆ.ಕೃಷ್ಣಾರೆಡ್ಡಿ, ಸಂಸದರಾದ ಪಿ.ಸಿ.ಮೋಹನ್, ಬಿ.ಎನ್.ಬಚ್ಚೇಗೌಡ, ತೇಜಸ್ವಿ ಸೂರ್ಯ, ಸಚಿವರಾದ ಆರ್.ಅಶೋಕ, ಶ್ರೀರಾಮುಲು, ಶಾಸಕರಾದ ಎಲ್.ಎನ್.ನಾರಾಯಣಸ್ವಾಮಿ, ಎಸ್.ಆರ್.ವಿಶ್ವನಾಥ್, ಡಾ.ಸುಧಾಕರ್, ಮಾಜಿ ಸಚಿವ ರಾಮಚಂದ್ರೇಗೌಡ, ವಿಧಾನಪರಿಷತ್ ಸದಸ್ಯ ಸರವಣ ಭಾಗವಹಿಸಲಿದ್ದಾರೆ.
7ರಂದು ಮುಕ್ಕೋಟಿ ದ್ವಾದಶಿ ಅಂಗವಾಗಿ ಕ್ಷೇತ್ರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ನೇತೃತ್ವದಲ್ಲಿ ಸದ್ಗುರು ಯೋಗಿನಾರೇಯಣ ಯತೀಂದ್ರರ ಕೀರ್ತನೆ, ಸಾಮೂಹಿಕ ಭಜನೆ, ಮೇನೆ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಸಮಿತಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.