ದೊಡ್ಡಬಳ್ಳಾಪುರ: ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಆಗಸ್ಟ್ 2 ರಂದು ಉತ್ತರ ಕರ್ನಾಟಕ ಬಂದ್ಗೆ ಕರೆ ನೀಡಿರುವ ಕ್ರಮವನ್ನು ಖಂಡಿಸಿ ಹಾಗೂ ಅಖಂಡ ಕರ್ನಾಟಕ ಉಳಿವಿಗೆ ಒತ್ತಾಯಿಸಿ ಶ್ರೀ ಭುವನೇಶ್ವರಿ ಕನ್ನಡ ಸಂಘದ ನೇತೃತ್ವದಲ್ಲಿ ಬುಧವಾರ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತಹಶಲ್ದಾರರ ಮೂಲಕ ಮನವಿ ಸಲ್ಲಿಸಿಸಲಾಯಿತು.
ಮುಖಂಡರು ಮಾತನಾಡಿ, ಕರ್ನಾಟಕ ಏಕೀಕರಣದಲ್ಲಿ ಹಲವಾರು ಹೋರಾಟಗಾರರ ಪರಿಶ್ರಮವಿದೆ. ಆದರೆ ಇಂದಿಗೂ ಸಹ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮೈಸೂರು ಭಾಗ, ಕರಾವಳಿ ಎನ್ನುತ್ತಾ ಕರ್ನಾಟಕವನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. ಮಹದಾಯಿ, ಅಲಮಟ್ಟಿ ವಿವಾದ ಮೊದಲಾಗಿ ಉತ್ತರ ಕರ್ನಾಟಕದವರ ಸಮಸ್ಯೆಗಳಿಗೆ ಇಡಿ ನಾಡೇ ಒಟ್ಟಾಗಿಯೇ ಹೋರಾಟ ನಡೆಸಿದೆ. ಇದನ್ನರಿಯದೆ ಕೆಲವು ರಾಜಕಾರಣಿಗಳ ಮೇಲಾಟಕ್ಕೆ ಮರುಳಾಗಿ ಪ್ರತ್ಯೇಕ ರಾಜ್ಯ ಬೇಡಿಕೆ ಇಟ್ಟಿರುವುದು ಇಡೀ ರಾಜ್ಯದ ಜನತೆ ಒಕ್ಕೂರಲಿನಿಂದ ವಿರೋಧಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ ಆಗಸ್ಟ್ 2 ರಂದು ಉತ್ತರ ಕರ್ನಾಟಕ ಬಂದ್ಗೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್, ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್, ಕರವೇ ನಾರಾಯಣ ಗೌಡ ಬಣದ ಜಿಲ್ಲಾ ಕಾರ್ಯಧ್ಯಕ್ಷ ಟಿ.ಜಿ.ಮಂಜುನಾಥ್, ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ನವೀನ್ ಪ್ರಭುದೇವ್, ಕಾರ್ಯದರ್ಶಿ ಇ.ಕೆಂಪರಾಜು, ಜಿಲ್ಲಾ ಶಿವರಾಜ್ಕುಮಾರ್ ಸೇನಾ ಸಮಿತಿ ಅಧ್ಯಕ್ಷ ಚೌಡರಾಜ್, ಮುಖಂಡರಾದ ಕಮಲನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.