ದೇವನಹಳ್ಳಿ : ವಾರ್ಷಿಕ 10ನೇ ತರಗತಿ ಪರೀಕ್ಷಾ ಕೇಂದ್ರವನ್ನು ಬೇರೆಡೆ ಬದಲಾವಣೆ ಮಾಡಿರುವುದನ್ನು ಖಂಡಿಸಿ ಸ್ಥಳೀಯ ಪೋಷಕರು ವಿಶ್ವನಾಥಪುರ ಸರ್ಕಾರಿ ಪಬ್ಲಿಕ್ ಶಾಲಾ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪೋಷಕ ಹರೀಶ್ ಕುಮಾರ್ ಮಾತನಾಡಿ, ಸರ್ಕಾರಿ ಪ್ರೌಢ ಶಾಲೆ ಆರಂಭಗೊಂಡು 18 ವರ್ಷಗಳಿಂದ ಪರೀಕ್ಷಾ ಕೇಂದ್ರ ನಡೆಯುತ್ತಿದೆ. ಪರೀಕ್ಷಾ ಕೇಂದ್ರಕ್ಕೆ ಈವರೆಗೆ ಯಾವುದೇ ಒಂದು ಕಪ್ಪ ಚುಕ್ಕೆ ಅಂಟಿಲ್ಲ. ಸರ್ಕಾರಿ ಪ್ರೌಢ ಶಾಲೆಗಳಾದ ತಿಂಡ್ಲು, ಕುಂದಾಣ, ಕುಂದಾಣ ಮೊರಾರ್ಜಿ ವಸತಿ ಶಾಲೆ, ಬಚ್ಚಹಳ್ಳಿ, ಕೊಯಿರಾ ಮತ್ತು ಮಹಾ ಬೋಧಿ ಶಾಲೆಯ ವಿದ್ಯಾರ್ಥಿಗಳು ವಿಶ್ವಾನಾಥಪುರ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಪ್ರಸ್ತುತ ಅಲೂರು ದುದ್ದನಹಳ್ಳಿ ಬಳಿ ಇರುವ ಖಾಸಗಿ ಶಾಲೆಗೆ ಪರೀಕ್ಷಾ ಕೇಂದ್ರ ಸ್ಥಳಾಂತರ ಮಾಡಿರುವುದು ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ತೊಂದರೆಯಾಗುತ್ತಿದೆ ಎಂದರು.
ವಿಶ್ವನಾಥಪುರದಲ್ಲೇ ಪರೀಕ್ಷಾ ಕೇಂದ್ರ ಮುಂದುವರೆಯಬೇಕು ಎಂದು ಒತ್ತಾಯಿಸಿದರು.
ಪೊಷಕರಾದ ಡಿ.ಮೂರ್ತಿ, ಎಂ.ರಾಜಣ್ಣ, ಶಿವಕುಮಾರ್ ಮಾತನಾಡಿ, ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿ.ಡಿ.ಪಿ.ಐ ಕಚೇರಿ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಗೆ ಸ್ಥಳಾಂತರಗೊಂಡಿದೆ ಎಂದು ಉಪನಿರ್ದೇಶಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಬದಲಾವಣೆ ಮಾಡಿರುವ ಪರೀಕ್ಷಾ ಕೇಂದ್ರಕ್ಕೆ ಬಸ್ ಸೌಲಭ್ಯವಿಲ್ಲ. ವಿಶ್ವನಾಥಪುರದಿಂದ 6 ರಿಂದ 7 ಕಿ.ಮೀ ದೂರ ಇದೆ. ಬಸ್ ವ್ಯವಸ್ಥೆ ಮಾಡುವವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೋಷಕರಾದ ಶ್ರೀರಾಮಯ್ಯ, ಕೃಷ್ಣಮೂರ್ತಿ, ಶಿವರಾಮಯ್ಯ ಮತ್ತು ರಾಮಮೂರ್ತಿ ಮಾತನಾಡಿ, ‘ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಪರೀಕ್ಷಾ ಕೇಂದ್ರ ಸ್ಥಳಾಂತರವಾಗುವುದು ನೋಡಿದ್ದೇವೆ. ಇಲ್ಲಿ ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ಎಂದರೆ ಅರ್ಥವೇನು’ ಎಂದು ಪ್ರಶ್ನಿಸಿದರು.
‘ಖಾಸಗಿ ಶಾಲೆಯಲ್ಲಿ ಹಾಜರಾತಿ ಹೆಚ್ಚಿಸಿಕೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳೆ ನೇರವಾಗಿ ಶಾಮೀಲಾಗಿದ್ದಾರೆ ಎಂದರೆ ಇವರಿಗೆ ಸರ್ಕಾರಿ ಶಾಲೆಗಳ ಮೇಲೆ ಯಾವ ರೀತಿ ಕಾಳಜಿ ಇದೆ. ಇಲಾಖೆಯ ವೇತನ ಪಡೆದು ಸರ್ಕಾರಿ ಶಾಲೆಗಳಿಗೆ ವಂಚನೆ ಎಂದರೆ ಹೇಗೆ. ಪರೀಕ್ಷಾ ಕೇಂದ್ರ ಇಲ್ಲೇ ಇರಬೇಕು. ಡಿ.ಡಿ.ಪಿ.ಐ. ಕಚೇರಿ ಶಾಶ್ವತವಾಗಿ ಇಲ್ಲೇ ಇರಬೇಕು. ತಾತ್ಕಾಲಿಕವೆಂದರೆ ನಾವು ಯಾವುದೇ ಕಾರಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಎಂ.ಪಿ.ಸಿ.ಎಸ್ ಅಧ್ಯಕ್ಷ ಪಿ.ಸುಬ್ರಮಣಿ, ಮುಖಂಡ ಬಿ.ಸಿ.ಕೃಷ್ಣಪ್ಪ, ವಸಂತಕುಮಾರ್ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.