ADVERTISEMENT

ಮತಪತ್ರ ಬಳಸಲು ಒತ್ತಾಯಿಸಿ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 13:29 IST
Last Updated 25 ಜನವರಿ 2019, 13:29 IST
ಪ್ರತಿಭಟನೆಯಲ್ಲಿ ಬಿ.ಎಸ್.ಪಿ ಕಾರ್ಯಕರ್ತರು.
ಪ್ರತಿಭಟನೆಯಲ್ಲಿ ಬಿ.ಎಸ್.ಪಿ ಕಾರ್ಯಕರ್ತರು.   

ದೇವನಹಳ್ಳಿ: 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಪ್ರಚಂಡ ಗೆಲುವು ಸಾಧಿಸಲು ಬಿಜೆಪಿಗೆ ಇ.ವಿ.ಎಂ.ಗಳೇ ನೆರವಾಗಿವೆ ಎಂದು ಬಿ.ಎಸ್.ಪಿ ರಾಜ್ಯ ಘಟಕ ಕಾರ್ಯದರ್ಶಿ ಈರಣ್ಣ ಮೌರ್ಯ ಆರೋಪಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಮತಪತ್ರ ಬಳಕೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘2014ರ ಲೋಕಸಭೆ ಚುನಾವಣೆ ನಡೆದ ನಂತರ ಮತದಾನದ ಪ್ರಕ್ರಿಯೆಯಲ್ಲಿ ಆನೇಕ ಅನುಮಾನಗಳು ಕಾಡತೊಡಗಿದ್ದವು. ಚುನಾವಣೆ ಆಯೋಗ ಮತ್ತು ಬಿಜೆಪಿ ಸಮರ್ಥನೆ ಮಾಡಿಕೊಂಡಿದ್ದವು. ಬೇರೆ ಯಾವುದೇ ಪಕ್ಷದ ಕಾರ್ಯಕರ್ತರಿಗೆ ಅದು ಒಪ್ಪಿಗೆಯಾಗಲಿಲ್ಲ’ ಎಂದು ಆರೋಪಿಸಿದರು.

ADVERTISEMENT

ಬಿಜೆಪಿ, ಇವಿಎಂನಿಂದ ಅವೈಜ್ಞಾನಿಕವಾಗಿ ಆಯ್ಕೆಗೊಂಡು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಮತದಾರರ ಮೇಲೆ ನಂಬಿಕೆ ಇಲ್ಲದ ಬಿಜೆಪಿ, ಮತಯಂತ್ರವನ್ನು ನಂಬಿಕೊಂಡಿದೆ ಎಂದು ದೂರಿದರು.

ಬಿ.ಎಸ್.ಪಿ ಜಿಲ್ಲಾ ಉಸ್ತುವಾರಿ ನಂದ ಗುಂದ ವೆಂಕಟೇಶ್ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮತಗಳನ್ನು ಯಂತ್ರಗಳ ಮೂಲಕ ಕನ್ನ ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ತಿಳಿಸಿದರು.

‘ಅಮೆರಿಕದ ಸೈಬರ್ ಪರಿಣಿತ ಸೈಯದ್ ಶುಖಾ ಲಂಡನ್‌ನಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಬಹುದು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಈ ಕೃತ್ಯ ಎಸಗಿದೆ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ. ಹ್ಯಾಕ್ ಬಗ್ಗೆ ಬಿಜೆಪಿ ಮುಖಂಡ ಗೋಪಿನಾಥ್ ಮುಂಢೆಗೆ ತಿಳಿದಿತ್ತು. ಅವರ ಸಾವು ಅನುಮಾನಕ್ಕೆ ಆಸ್ಪದ ನೀಡುವಂತಿದೆ’ ಎಂದು ವಿವರಿಸಿದರು.

ಬಿಜೆಪಿ ಆಡಳಿತ ಮತದಾರರ ಅತ್ಮಸಾಕ್ಷಿಯನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮುನಿಕೃಷ್ಣ ಮಾತನಾಡಿದರು. ಜಿಲ್ಲಾ ಘಟಕ ಕಾರ್ಯದರ್ಶಿ ಮುನಿರಾಜು, ತಾಲ್ಲೂಕು ಘಟಕ ಅಧ್ಯಕ್ಷ ಬಂಗಾರಪ್ಪ, ನೆಲಮಂಗಲ ತಾಲ್ಲೂಕು ಘಟಕ ಅಧ್ಯಕ್ಷ ಮಹದೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.