ದೊಡ್ಡಬಳ್ಳಾಪುರ: ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ನಿರ್ಬಂಧಿಸಿರುವ ನಾಮಫಲಕ ತೆರವುಗೊಳಿಸಲು ಖಾಸಗಿ ಬಸ್ ಮಾಲೀಕರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಸಂಘ ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಬಿಎಂಟಿಸಿ ಸಂಸ್ಥೆಗೆ ಅನುಕೂಲ ಕಲ್ಪಿಸಲು ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಅನಧಿಕೃತವಾಗಿ ಖಾಸಗಿ ಬಸ್ಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಖಾಸಗಿ ವಾಹನಗಳ ನಿಲುಗಡೆ ಮಾಡದಂತೆ ಅಳವಡಿಸಿರುವ ಸೂಚನಾಫಲಕವನ್ನು ಕೂಡಲೇ ನಗರಸಭೆ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಖಾಸಗಿ ಬಸ್ ಮಾಲೀಕರು ಸರ್ಕಾರದ ಪರವಾನಗಿಯಂತೆ ಬಸ್ ನಿಲ್ದಾಣವಾಗಿಸಿ ದಶಕಗಳಿಂದಲೂ ಪ್ರತಿನಿತ್ಯ ಖಾಸಗಿ ಬಸ್ಗಳು ದೊಡ್ಡಬಳ್ಳಾಪುರ ನಗರಸಭೆಗೆ ಸುಂಕ ಪಾವತಿಸಲಾಗುತ್ತಿದೆ. ಹಳೆಯ ಬಸ್ ನಿಲ್ದಾಣದಿಂದ ಬೆಂಗಳೂರು, ನೆಲಮಂಗಲ, ತುಮಕೂರು, ಗೌರಿಬಿದನೂರು, ಚಿಕ್ಕಬಳ್ಳಾಪುರ, ಕೋಲಾರ, ತಿರುಪತಿ ಮತ್ತಿತರ ನಗರಗಳಿಗೆ ಖಾಸಗಿ ಬಸ್ ಬಂದು ಹೋಗುತ್ತಿವೆ. ಈ ಎಲ್ಲಾ ಬಸ್ಗಳು ಕೊಂಗಾಡಿಯಪ್ಪ ಬಸ್ ನಿಲ್ದಾಣದಿಂದಲೇ ಸಂಚರಿಸುತ್ತಿವೆ ಎಂದರು.
ಮೂರು ದಿನಗಳ ಹಿಂದೆ ಬಿಎಂಟಿಸಿ ಸಂಸ್ಥೆಯವರು ಏಕಪಕ್ಷಿಯವಾಗಿ ಖಾಸಗಿ ಬಸ್ಗಳಿಗೆ ನಿರ್ಬಂಧ ಹಾಗೂ ಪ್ರವೇಶಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆಯ ಫಲಕ ಅನಧಿಕೃತವಾಗಿ ಅಳವಡಿಸಿದ್ದಾರೆ. ಸೂಚನಾಫಲಕ ಅಳವಡಿಸಲು ಸರ್ಕಾರವಾಗಲಿ, ನಗರಸಭೆಯಾಗಲಿ ನೋಟಿಸ್ ಹಾಗೂ ಅನುಮತಿ ನೀಡಿಲ್ಲ. ಕೊಂಗಾಡಿಯಪ್ಪ ಖಾಸಗಿ ಬಸ್ ನಿಲ್ದಾಣವನ್ನು ಸಾರ್ವಜನಿಕರ ಸ್ನೇಹಿಯಾಗಿ ಅಭಿವೃದ್ಧಿ ಮಾಡಬೇಕು ಎಂದು ನಗರಸಭೆಗೆ ಮನವಿ ಸಲ್ಲಿಸಿದರು.
ಖಾಸಗಿ ಬಸ್ ಮಾಲೀಕರ ಹಾಗೂ ಕಾರ್ಮಿಕರ ಸಂಘದ ಮುಖಂಡ ಪ್ರಶಾಂತ್, ವಿಕ್ರಮ್, ಕುಮಾರ್, ಗೋವಿಂದಪ್ಪ, ಮೊದಲಿಯರ್, ಕುಮಾರಸ್ವಾಮಿ, ಗೀತೇಶ್, ರುದ್ರಪ್ಪ, ಹರೀಶ್, ರಮೇಶ್, ಮಕೃಷ್ಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.