ADVERTISEMENT

ದೊಡ್ಡಬಳ್ಳಾಪುರ | ಜೋರು ಮಳೆ: ಮನೆಗೆ ನುಗ್ಗಿದ ಚರಂಡಿ ನೀರು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 7:43 IST
Last Updated 10 ನವೆಂಬರ್ 2023, 7:43 IST
ದೊಡ್ಡಬಳ್ಳಾಪುರ ಡಿ.ಕ್ರಾಸ್‌ ರಸ್ತೆಯಲ್ಲಿ ಗುರುವಾರ ಆಟೋದ ಮೇಲೆ ಮರದ ಕೊಂಬೆ ಬಿದ್ದು ಜಖಂಗೊಂಡಿರುವುದು
ದೊಡ್ಡಬಳ್ಳಾಪುರ ಡಿ.ಕ್ರಾಸ್‌ ರಸ್ತೆಯಲ್ಲಿ ಗುರುವಾರ ಆಟೋದ ಮೇಲೆ ಮರದ ಕೊಂಬೆ ಬಿದ್ದು ಜಖಂಗೊಂಡಿರುವುದು   

ದೊಡ್ಡಬಳ್ಳಾಪುರ: ಬುಧವಾರ ರಾತ್ರಿ ಸುರಿದ ಜೋರು ಮಳೆಗೆ ಮನೆಗಳ ಮೇಲೆ ಮರಗಳು ಉರುಳಿಬಿದ್ದಿವೆ. ಮನೆಗಳಿಗೆ ನೀರು ನುಗ್ಗಿದ್ದು, ಜನರು ತೊಂದರೆಗೆ ಸಿಲುಕಿದ್ದಾರೆ.

ನಗರದ ಡಿ.ಕ್ರಾಸ್ ರಸ್ತೆ ಬದಿಯಲ್ಲಿದ್ದ ಮರ ಚಲಿಸುತ್ತಿದ್ದ ಆಟೊದ ಮೇಲೆ ಮುರಿದುಬಿದ್ದಿದೆ. ಆಟೊ ಜಖಂ ಆಗಿದ್ದು,  ಆಟೊ ಚಾಲಕನಿಗೆ ಸಣ್ಣಪುಟ್ಟ ಗ್ರಾಯವಾಗಿದೆ.

ತಾಲ್ಲೂಕಿನ ಮೂಲಕ ಹಾದು ಹೋಗಿರುವ ಗೌರಿಬಿದನೂರು-ಹಿಂದೂಪುರ ರಾಜ್ಯದ ಹೆದ್ದಾರಿ ಬದಿಯಲ್ಲಿನ ಗೊಲ್ಲಹಳ್ಳಿ ತಾಂಡದಲ್ಲಿನ ಮನೆಗಳಿಗೆ ಹೆದ್ದಾರಿಯ ಮಳೆ ನೀರು ನುಗ್ಗಿದೆ.

ADVERTISEMENT

‘ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸುವಾಗಲೇ ಮಳೆ ನೀರು ಮನೆಗಳಿಗೆ ನುಗ್ಗುವ ಅಪಾಯದ ಬಗ್ಗೆ ಎಂಜಿನಿಯರ್‌ಗಳ ಗಮನಕ್ಕೆ ತಂದಿದ್ದೆವು. ಆದರೂ ಸಹ ನಮ್ಮ ಮನವಿಗಳಿಗೆ ಕಿವಿಗೊಡದೆ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿದರು. ಈಗ ಜೋರು ಮಳೆ ಬಂದರೆ ನೀರು ಮನೆಗಳಿಗೆ ನುಗ್ಗುತ್ತಿವೆ.  ಬೇರೆಡೆ ಮನೆ ನಿರ್ಮಿಸಿಕೊಳ್ಳಲು ಇಲ್ಲಿನ ಜನರಿಗೆ ನಿವೇಶನ ಇಲ್ಲದಾಗಿವೆ’ ಎಂದು ಗೊಲ್ಲಹಳ್ಳಿ ತಾಂಡದ ಹರೀಶ್‌ ನಾಯ್ಕ್‌ ಗ್ರಾಮದ ಜನರ ಅಳಲುತೋಡಿಕೊಂಡರು.

ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ 3ನೇ ವಾರ್ಡ್ ಮುತ್ಸಂದ್ರದ ಡಾ.ಬಿ.ಆರ್.ಅಂಬೇಡ್ಕರ್ ಕಾಲೊನಿಯಲ್ಲಿ ರಾತ್ರಿ ಹೆಂಚಿನ ಮನೆಯ ಮೇಲ್ಛಾವಣಿ ಮುರಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ವಾಸವಾಗಿದ್ದ ಹಿರಿಯರಾದ ನರಸಮ್ಮ ಅವರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.

‘ಐವತ್ತು ವರ್ಷಗಳಿಂದ ಇದೇ ಮನೆಯಲ್ಲಿಯೇ ವಾಸ ಮಾಡುತ್ತಿದ್ದೇನೆ. ಮಳೆ ಬಂದಾಗಲೆಲ್ಲ ಸೋರುತ್ತಿತ್ತು. ರಾತ್ರಿ ಬುಧವಾರ ಸುರಿದ ಜೋರು ಮಳೆಯಿಂದಾಗಿ ಹೆಂಚುಗಳು ಕಿತ್ತುಬಂದು ಕುಸಿದು ಬಿದ್ದಿದೆ. ನಾನೋಬ್ಬಳೆ ಮನೆಯಲ್ಲಿ ಇದ್ದಿದ್ದರಿಂದ ಏನು ಆಗಲಿಲ್ಲ. ಮಕ್ಕಳಿದ್ದಿದ್ದರೆ ಸಾಕಷ್ಟು ಅನಾಹುತಗಳಾಗುತ್ತಿದ್ದವು’ ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ನಗರಸಭೆ ಸದಸ್ಯರು ಹಾಗೂ ಪೌರಾಯುಕ್ತರ ಗಮನಕ್ಕೆ ತರಲಾಗಿದೆ. ಆದರೂ ಯಾರೊಬ್ಬರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಬೇಸರಿಸಿದರು.

ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ 3ನೇ ವಾರ್ಡ್‌ನ ಮುತ್ಸಂದ್ರದಲ್ಲಿ ಮಳೆಯಿಂದಾಗಿ ನರಸಮ್ಮ ಎಂಬುವವರ ಹೆಂಚಿನ ಮನೆ ಮೇಲ್ಛಾವಣಿ ಮುರಿದು ಬಿದ್ದಿರುವುದು
ದೊಡ್ಡಬಳ್ಳಾಪುರ ತಾಲ್ಲೂಕಿನ ಗೌರಿಬಿದನೂರು ರಾಜ್ಯ ಹೆದ್ದಾರಿಯಲ್ಲಿನ ಮಳೆ ನೀರು ಮನೆಗಳಿಗೆ ನುಗ್ಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.