ADVERTISEMENT

ಆನೇಕಲ್| ಅಂಬೇಡ್ಕರ್‌ಗೆ ಬೆನ್ನೆಲುಬಾಗಿದ್ದ ರಮಾಬಾಯಿ: ಬಿ.ಗೋಪಾಲ್‌ ಅಭಿಮತ

ಸೊಪ್ಪಹಳ್ಳಿಯಲ್ಲಿ ಮಾತೆ ರಮಾಬಾಯಿ, ವೇಮನ ಜಯಂತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 4:43 IST
Last Updated 9 ಫೆಬ್ರುವರಿ 2026, 4:43 IST
ಆನೇಕಲ್ ತಾಲ್ಲೂಕಿನ ಸೊಪ್ಪಹಳ್ಳಿ ಗ್ರಾಮದಲ್ಲಿ ಸಮಗ್ರ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್‌ ಮತ್ತು ಮಹಿಳಾ ಸಂಘಗಳ ವತಿಯಿಂದ ಮಾತೇರಮಾಬಾಯಿ ಅಂಬೇಡ್ಕರ್‌ ಮತ್ತು ವೇಮನ ಜಯಂತಿಯನ್ನುದ್ದೇಶಿಸಿ ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಮಾತನಾಡಿದರು
ಆನೇಕಲ್ ತಾಲ್ಲೂಕಿನ ಸೊಪ್ಪಹಳ್ಳಿ ಗ್ರಾಮದಲ್ಲಿ ಸಮಗ್ರ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್‌ ಮತ್ತು ಮಹಿಳಾ ಸಂಘಗಳ ವತಿಯಿಂದ ಮಾತೇರಮಾಬಾಯಿ ಅಂಬೇಡ್ಕರ್‌ ಮತ್ತು ವೇಮನ ಜಯಂತಿಯನ್ನುದ್ದೇಶಿಸಿ ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಮಾತನಾಡಿದರು   

ಆನೇಕಲ್: ಸಮಾಜದ ಅಭಿವೃದ್ಧಿಯಲ್ಲಿ ಸ್ತ್ರೀಯರ ಪಾತ್ರ ಅತ್ಯಂತ ಪ್ರಮುಖವಾದುದ್ದು, ಅಂಬೇಡ್ಕರ್ ಅವರಿಗೆ ರಮಾಬಾಯಿ ಅವರು ಬೆನ್ನೆಲುಬಾಗಿ ನಿಂತಿದ್ದರು. ಅವರ ತ್ಯಾಗ ಮತ್ತು ಬಾಬಾ ಸಾಹೇಬರಿಗೆ ನೀಡಿದ ಸಹಕಾರ, ಪ್ರೋತ್ಸಾಹ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿಯಾಗಿದೆ ಎಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಗೋಪಾಲ್‌ ಹೇಳಿದರು.

ತಾಲ್ಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಪ್ಪಹಳ್ಳಿಯಲ್ಲಿ ಸಮಗ್ರ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್‌ ಮತ್ತು ಮಹಿಳಾ ಸಂಘಗಳು ಆಯೋಜಿಸಿದ್ದ ಮಾತೆ ರಮಾಬಾಯಿ ಅಂಬೇಡ್ಕರ್‌ ಮತ್ತು ವೇಮನ ಜಯಂತಿಯಲ್ಲಿ ಮಾತನಾಡಿದರು.

ಅಂಬೇಡ್ಕರ್‌ ಅವರ ಪ್ರತಿ ಸಾಧನೆಯಲ್ಲೂ ರಮಾಬಾಯಿ ಅವರು ಜೊತೆಗಿದ್ದರು. ಅಮಾವನ ಎದುರಿಸಿ ಸಮ ಸಮಾಜದ ಪರಿಕಲ್ಪನೆ ನೀಡಿದರು. ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಪತಿಗೆ ಪ್ರೋತ್ಸಾಹ ನೀಡಿದ ಮಹಾತ್ಯಾಗಿಯಾಗಿದ್ದರು. ಮಾತೃ ಹೃದಯ ಇದ್ದಾಗ ಮಾತ್ರ ಕಷ್ಟಸುಖಗಳಿಗೆ ಸ್ಪಂದಿಸುವ ಗುಣ ಬರುತ್ತದೆ ಎಂದು ತಿಳಿಸಿದರು.

ADVERTISEMENT

ವೇಮನರ ತತ್ವಪದಗಳು ಸಮಾಜದಲ್ಲಿನ ಮೂಢನಂಬಿಕೆ ಮತ್ತು ಕಂದಾಚಾರ ತೊಲಗಿಸಲು ಸಹಕಾರಿಯಾಗಿವೆ. ಮಹನೀಯರ ಜಯಂತಿಗಳನ್ನು ಆಚರಿಸುವುದರ ಜೊತೆಗೆ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಕೀಲ ಆನಂದ ಚಕ್ರವರ್ತಿ, ಸಮ ಸಮಾಜದ ನಿರ್ಮಾಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾಮರಸ್ಯ ವಾತಾವರಣ ಮೂಡಿಸಲು ಮಾತೆ ರಮಾಬಾಯಿ ಅಂಬೇಡ್ಕರ್ ಜಯಂತಿ ಮತ್ತು ವೇಮನ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸಲಾಗಿದೆ. ಸಮಾಜ ಸುಧಾರಕರಿಗೆ ಮತ್ತು ತತ್ವಜ್ಞಾನಿಗಳಿಗೆ ಯಾವುದೇ ರೀತಿಯಾದ ಜಾತಿ ಇರುವುದಿಲ್ಲ. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ತಪ್ಪಾಗಿದೆ. ಮಹನೀಯರ ಆದರ್ಶಗಳೇ ನಮಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಮತ್ತು ಮಹಿಳೆಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗ್ರಾಮ ಪಂಚಾಯಿತಿ ಸದಸ್ಯ ಸತೀಶ್, ಸಮಗ್ರ ಗ್ರಾಮ ಅಭಿವೃದ್ಧಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಸಂಪಂಗಿ ರಾಮಯ್ಯ, ಖಜಾಂಚಿ ಮಂಜುನಾಥ ರೆಡ್ಡಿ, ಕಾರ್ಯದರ್ಶಿ ವಿಶ್ವನಾಥ್, ಮುಖಂಡರಾದ ನಾರಾಯಪ್ಪ, ಅಪ್ಪಯ್ಯ, ಜ್ಯೋತಿ, ಪುಷ್ಪ, ಪುಟ್ಟರಾಜು ಇದ್ದರು.

ಮಕ್ಕಳ ಊಟಕ್ಕಾಗಿ ಚಿನ್ನದ ಬಳೆ ಮಾರಿದ್ದರು...

1930ರ ಸುಮಾರಿನಲ್ಲಿ ಧಾರವಾಡದ ವಸತಿ ನಿಲಯದಲ್ಲಿ ರಮಾಬಾಯಿ ಅವರಿದ್ದಾಗ ಅನುದಾನ ಕೊರತೆಯಿಂದ ಮಕ್ಕಳ ಊಟಕ್ಕೆ ತೊಂದರೆಯಾದಾಗ ರಮಾಬಾಯಿ ಅವರು ತಮ್ಮ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಮಾರಿ ಊಟದ ವ್ಯವಸ್ಥೆ ಮಾಡಿದ್ದರು. ಕಷ್ಟಕ್ಕೆ ಸ್ಪಂದಿಸುವ ಗುಣ ಅವರಲ್ಲಿತ್ತು ಎಂದು ವಕೀಲ ಆನಂದ ಚಕ್ರವರ್ತಿ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.