ADVERTISEMENT

ಬಿಜೆಪಿ ಹೇಳಿಕೆಗಷ್ಟೇ ಸೀಮಿತ: ಶಾಸಕ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:47 IST
Last Updated 9 ಮೇ 2020, 9:47 IST
ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ಆಹಾರದ ಕಿಟ್‌ಗಳನ್ನು ಶಾಸಕರಾದ ರಾಮಲಿಂಗಾರೆಡ್ಡಿ ಮತ್ತು ಬಿ.ಶಿವಣ್ಣ ವಿತರಿಸಿದರು
ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ಆಹಾರದ ಕಿಟ್‌ಗಳನ್ನು ಶಾಸಕರಾದ ರಾಮಲಿಂಗಾರೆಡ್ಡಿ ಮತ್ತು ಬಿ.ಶಿವಣ್ಣ ವಿತರಿಸಿದರು   

ಆನೇಕಲ್: ಬಿಜೆಪಿಯವರು ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದಾರೆ. ಸಮಗ್ರ ಅಭಿವೃದ್ಧಿ ದೃಷ್ಠಿ ಕೋನ ಹೊಂದಿಲ್ಲ ಎಂದು ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಟೀಕಿಸಿದರು.

ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರಿಗೆ ಶುಕ್ರವಾರ ಆಹಾರದ ಕಿಟ್‌ ವಿತರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ₹ 1.8 ಲಕ್ಷ ಕೋಟಿ ಪ್ಯಾಕೆಜ್‌ನ್ನು ಪ್ರಕಟಿಸಿದೆ. ಆದರೆ ಇದು ಕಾರ್ಯಗತವಾಗಿ ಜನಸಾಮಾನ್ಯರಿಗೆ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯಕ್ಕೆ ಘೋಷಣೆ ಮಾಡಿರುವ ₹ 1,600 ಕೋಟಿಯ ಪ್ಯಾಕೆಜ್‌ ಸಹ ಕಣ್ಣೊರೆಸುವ ಕಾರ್ಯವಾಗಿದೆ ಎಂದರು.

ADVERTISEMENT

ಎರಡು ತಿಂಗಳಿನಿಂದ ಜನರು ಯಾವುದೇ ಉದ್ಯೋಗವಿಲ್ಲದೇ ಮನೆಯಲ್ಲಿದ್ದಾರೆ. ಅಕ್ಕಿಯನ್ನು ಹೊರತು ಪಡಿಸಿ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಅಕ್ಕಿಯ ಜೊತೆಗೆ ದಿನಸಿ ದಿನಬಳಕೆಯ ವಸ್ತುಗಳ ಕಿಟ್‌ನ್ನು ಪಡಿತರ ವಿತರಣೆ ಜೊತೆಗೆ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಯಾವುದೇ ಸೌಲಭ್ಯ ನೀಡಿಲ್ಲ. ಮಡಿವಾಳರು, ಕ್ಷೌರಿಕರಿಗೆ ₹ 5ಸಾವಿರ ಪರಿಹಾರ ನೀಡಿದ್ದಾರೆ. ಆದರೆ ಇದರಿಂದ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ. ಕನಿಷ್ಠ ₹10 ಸಾವಿರ ಪರಿಹಾರ
ಧನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇವರ ವೈಪಲ್ಯದಿಂದಾಗಿ ನೆರೆ ರಾಜ್ಯಗಳ 1.70 ಲಕ್ಷ ಕಾರ್ಮಿಕರು ರಾಜ್ಯ ಬಿಟ್ಟು ತವರು ರಾಜ್ಯಗಳಿಗೆ ಹೋಗಿದ್ದಾರೆ. ಸೌಲಭ್ಯ ನೀಡಿದ್ದರೆ ಇಲ್ಲಿಯೇ ಇರುತ್ತಿದ್ದರು ಎಂದರು.

ಶಾಸಕ ಬಿ.ಶಿವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರರೆಡ್ಡಿ, ಉಪಾಧ್ಯಕ್ಷೆ ಲತಾ ಶ್ರೀನಿವಾಸ್‌, ಸದಸ್ಯರಾದ ಪುರುಷೋತ್ತಮ್‌ರೆಡ್ಡಿ, ಎಸ್‌.ಟಿ.ಡಿ.ರಮೇಶ್, ಚಂದ್ರಪ್ಪ, ಕೃಷ್ಣಪ್ಪ, ನಿರ್ಮಲಾ, ಆನಂದ್‌, ಗೌರಮ್ಮ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜಣ್ಣ, ಮುಖಂಡರಾದ ಬಿ.ಪಿ.ರಮೇಶ್, ಶ್ರೀನಿವಾಸ್, ಯಲ್ಲಪ್ಪ, ಲೋಕೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.