ADVERTISEMENT

ಯೋಧರಿಗೆ ಗೌರವ ನೀಡುವುದು ಎಲ್ಲರ ಕರ್ತವ್ಯ 

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:15 IST
Last Updated 15 ಫೆಬ್ರುವರಿ 2020, 14:15 IST
ಹುತಾತ್ಮ ಯೋಧರ ಸ್ಮಾರಕವಿರುವ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಹುತಾತ್ಮ ಯೋಧರ ಸ್ಮಾರಕವಿರುವ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.   

ದೇವನಹಳ್ಳಿ: ದೇಶ ರಕ್ಷಕ ಹುತಾತ್ಮ ಯೋಧರಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯವೆಂದು ಬಿಜೆಪಿ ರಾಜ್ಯ ಪರಿಷದ್ ಸದಸ್ಯ ದೇ.ಸು.ನಾಗರಾಜ್ ಹೇಳಿದರು.

ಇಲ್ಲಿನ ಸರ್ಕಲ್ ಆಂಜನೇಯ ಸ್ವಾಮಿ ದೇವಾಲಯದ ಬಳಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಒಂದನೇ ವರ್ಷದ ನೆನಪಿಗಾಗಿ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶ ರಕ್ಷಣೆ ಮಾಡುತ್ತಿರುವ ಯೋಧರ ಬಗ್ಗೆ ಪಕ್ಷಪಾತ, ಜಾತಿ ಧರ್ಮದ ಸೊಂಕು ಇರಬಾರದು. ಶತ್ರು ಹಿಮ್ಮೆಟ್ಟಿಸಲು ನಿರಂತರವಾಗಿ ದೇಶದ ಕಾವಲು ಕಾಯುತ್ತಿರುವ ಯೋಧರ ನಿರಂತರ ಪರಿಶ್ರಮದಿಂದ ನಾವು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

ಬಿಜೆಪಿ ಮುಖಂಡ ರಮೇಶ್ ಕುಮಾರ್ ಮಾತನಾಡಿ, ‘ಪುಲ್ವಾಮಾ ಹತ್ಯಾಕಾಂಡ ಇಡಿ ವಿಶ್ವದ ಗಮನ ಸೆಳೆದಿತ್ತು. ಭಾರತದ ಜನತೆಯ ಅತಂಕಕ್ಕೂ ಘಟನೆ ಕಾರಣವಾಗಿತ್ತು. ಪ್ರತೀಕಾರಕ್ಕಾಗಿ ಕಾಯುತ್ತಿದ್ದ ಭಾರತ ಯೋಧರು ಪಾಕಿಸ್ಥಾನದಲ್ಲಿ ಆಡಗಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡುವ ಮೂಲಕ ಮೃತ ಯೋಧರ ಕುಟುಂಬದವರೆಗೆ ಸಾಂತ್ವನದ ಸಂದೇಶ ನೀಡಿದ್ದರು’ ಎಂದು ಹೇಳಿದರು.

ಜೆಡಿಎಸ್ ನಗರ ಘಟಕ ಅಧ್ಯಕ್ಷ ಮುನಿನಂಜಪ್ಪ ಮಾತನಾಡಿ, ‘ದೇಶ ಸೇವೆಯಲ್ಲಿ ಕರ್ತವ್ಯ ನಿರತ ಯೋಧರು ಹುತಾತ್ಮರಾದ ನಂತರ ಅವರ ಕುಟುಂಬಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಕಾಣಬೇಕು., ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಯೋಧರ ಕುಟುಂಬಗಳಿಗೆ ಸರ್ಕಾರ ಒಂದಿಷ್ಟು ಹಣ ನೀಡಿ ಅನುಕೂಲ ಮಾಡುವುದರ ಜೊತೆಗೆ ಯೋಧರ ಸ್ಮಾರಕಗಳಿಗೆ ಕಾಯಕಲ್ಪ ನೀಡಿದರೆ ಯುವ ಸಮುದಾಯಕ್ಕೆ ಸ್ಫೂರ್ತಿ ಸಿಗಲಿದೆ’ ಎಂದು ಹೇಳಿದರು.

‘ಹುತಾತ್ಮ ಯೋಧರಿಗೆ ಗೌರವಿಸಬೇಕು ಮತ್ತು ಪ್ರತಿ ಕುಟುಂಬದಲ್ಲಿ ಒಬ್ಬ ಯೋಧರನ್ನಾಗಿಸಿ ದೇಶ ರಕ್ಷಣೆಗೆ ಕಳುಹಿಸಬೇಕು. ಯೋಧರ ಸ್ಮರಣೆ ಒಂದು ದಿನಕ್ಕೆ ಸಿಮಿತವಾಗದೆ ಅವರ ಕರ್ತವ್ಯದಲ್ಲಿನ ಸಾಹಸ ಶೌರ್ಯ ಜೀವನವನ್ನು ಮಕ್ಕಳಿಗೆ ತಿಳಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.