ADVERTISEMENT

ನಟ ಪುನೀತ್‌ ರಾಜ್‌ಕುಮಾರ್‌ ಯುವಜನರಿಗೆ ಸ್ಫೂರ್ತಿ: ಪತ್ರಕರ್ತ ರಾಜಶೇಖರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 4:00 IST
Last Updated 1 ನವೆಂಬರ್ 2021, 4:00 IST
ದೊಡ್ಡಬಳ್ಳಾಪುರದಲ್ಲಿ ಭಾನುವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಪುನೀತ್‌ ರಾಜ್‌ಕುಮಾರ್‌ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ದೊಡ್ಡಬಳ್ಳಾಪುರದಲ್ಲಿ ಭಾನುವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಪುನೀತ್‌ ರಾಜ್‌ಕುಮಾರ್‌ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ದೊಡ್ಡಬಳ್ಳಾಪುರ:ಕನ್ನಡ ಚಿತ್ರರಂಗದ ನಾಯಕ ನಟರಲ್ಲಿ ಹೆಚ್ಚು ಸಾಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಯುವ ಸಮುದಾಯಕ್ಕೆ ಪುನೀತ್‌ ರಾಜ್‌ಕುಮಾರ್‌ ಸ್ಫೂರ್ತಿಯಾಗಿದ್ದರು ಎಂದು ಪತ್ರಕರ್ತ ರಾಜಶೇಖರ ಶೆಟ್ಟಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪುನೀತ್‌ ರಾಜ್‌ಕುಮಾರ್‌ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದ ಜನ ಮಾನಸದಲ್ಲಿ ದೊಡ್ಮನೆ ಎಂದೇ ಹೆಸರಾಗಿದ್ದ ರಾಜ್‌ಕುಮಾರ್‌ ಕುಟುಂಬದ ಘನತೆಯನ್ನು ಬಹು ಎತ್ತರಕ್ಕೆ ಕೊಂಡೊಯ್ದ ಕೀರ್ತಿಗೆ ಪಾತ್ರರಾಗಿದ್ದ ಪುನೀತ್‌ ಅವರ ಸಮಾಜ ಸೇವಾ ಕೆಲಸಗಳು ಯುವ ಸಮುದಾಯಕ್ಕೆ ಮಾರ್ಗದರ್ಶಿಯಾಗಿವೆ ಎಂದರು.

ADVERTISEMENT

ವ್ಯಕ್ತಿಯ ಘನತೆ ಜನರಿಗೆ ಅರ್ಥವಾಗುವುದೇ ಸಾವಿನಲ್ಲಿ ಎನ್ನುವುದಕ್ಕೆ ಪುನೀತ್‌ ಸಾವು ಸಾಕ್ಷಿಯಾಗಿದೆ. ದೇಶ, ವಿದೇಶಗಳಲ್ಲಿನ ಕಲಾವಿದರು, ಮಾಧ್ಯಮಗಳು ಪುನೀತ್‌ ಅವರ ನಟನೆ ಹಾಗೂ ಸಮಾಜ ಸೇವಾ ಕೆಲಸಗಳನ್ನು ಕುರಿತು ಮಾತನಾಡುತ್ತಿರುವುದು ಕನ್ನಡಿಗರು ಸದಾ ಹೆಮ್ಮೆಪಡುವಂತಾಗಿದೆ. ಅವರ ಸ್ಥಾನವನ್ನು ಬೇರೆಯಾರು ತುಂಬಲು ಸಾಧ್ಯವೇ ಇಲ್ಲದಂತಾಗಿದೆ ಎಂದು
ಹೇಳಿದರು.

ಸಭೆಯಲ್ಲಿ ಪುನೀತ್‌ ಸೇವಾ ಕೆಲಸಗಳನ್ನು ಸ್ಮರಿಸಲಾಯಿತು. ಸಭೆಯಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗರಾಜ್‌ ಶಿರವಾರ, ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಡಿ. ಶ್ರೀಕಾಂತ, ಮುಖಂಡರಾದ ದೇವರಾಜ್‌, ರಮೇಶ್‌, ಮುರುಳಿ, ಕೆ.ಆರ್‌. ರವಿಕಿರಣ್‌, ವೆಂಕಟೇಶ್‌, ಚಂದ್ರಶೇಖರ್‌ ಉಪ್ಪಾರ್‌, ತೂಬಗೆರೆ ಷರೀಫ್‌, ಕೊತ್ತೂರಪ್ಪ, ಮುನಿರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.