ದೊಡ್ಡಬಳ್ಳಾಪುರ: ‘ಛಲವಾದಿ ಮಹಾಸಭಾದ ಕಾರ್ಯಕಾರಿ ಸಮಿತಿ ಮತ್ತು ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮಹಾಸಭಾವನ್ನು ಬಲಪಡಿಸಬೇಕು’ ಎಂದು ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಸಿ. ಗುರುರಾಜಪ್ಪ ಹೇಳಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಮಹಾಸಭಾ ಕಾರ್ಯಕಾರಿ ಸಮಿತಿ ಪುನರ್ ರಚನೆ ಮತ್ತು ರಾಜ್ಯ ಸಮಿತಿಗೆ ಆಜೀವ ಸದಸ್ಯತ್ವ ನೋಂದಣಿ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.
ಶೋಷಣೆಗೆ ಒಳಗಾಗಿರುವ ಎಲ್ಲಾ ಸಮುದಾಯಗಳು ಕೂಡ ಒಗ್ಗಟ್ಟಿನ ಮಂತ್ರ ಪಠಿಸುತ್ತಿವೆ. ಈ ಹಿನ್ನೆಲೆಯಲ್ಲಿ ಛಲವಾದಿ ಸಮುದಾಯ ಸಹ ಒಗ್ಗಟ್ಟಾಗುವ ಹಾಗೂ ಸಮುದಾಯದ ಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸಮಿತಿಯಲ್ಲಿ ಆಜೀವ ಸದಸ್ಯರಾಗಬೇಕಿದೆ ಎಂದರು.
ಛಲವಾದಿ ಸಮುದಾಯದ ಸಂಪನ್ಮೂಲ ವ್ಯಕ್ತಿ ಕೇಶವಮೂರ್ತಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಭ್ರಾತೃತ್ವ, ಪರಸ್ಪರ ಪ್ರೀತಿ, ಸಹೋದರತೆ, ಸಮಾನತೆ ಪಾಲಿಸಿಕೊಂಡು ಸಮುದಾಯವನ್ನು ಪ್ರಗತಿಯ ದಿಕ್ಕಿನತ್ತ ಕೊಂಡೊಯ್ಯಬೇಕಿದೆ. ಸಮುದಾಯದ ಕಾರ್ಯ ಚಟುವಟಿಕೆಯನ್ನು ಕ್ರಿಯಾಶೀಲಗೊಳಿಸುವ ಅಗತ್ಯ ಇದೆ ಎಂದು ಹೇಳಿದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ರಾಜು ಸಣ್ಣಕ್ಕಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎನ್.ಎಲ್.ಎನ್. ಮೂರ್ತಿ ಅವರನ್ನು ನೇಮಿಸಲಾಯಿತು.
30 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು. ನೂತನವಾಗಿ ಪ್ರಾರಂಭವಾದ ಛಲವಾದಿ ಸಮುದಾಯದ ವಕೀಲರ ಘಟಕದ ಅಧ್ಯಕ್ಷರಾಗಿ ಶಿವಕುಮಾರ್ ಆಯ್ಕೆಯಾದರು.
ರಾಜ್ಯ ಸಮಿತಿ ಪ್ರತಿನಿಧಿ ಕುಮಾರಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕಾರ್ಯಧ್ಯಕ್ಷ ಕೆ.ಎಂ. ರಾಮಾಂಜಿನಪ್ಪ, ಉಪಾಧ್ಯಕ್ಷ ಹನುಮಂತಯ್ಯ, ದೊಡ್ಡಬೆಳವಂಗಲ ಹೋಬಳಿ ಘಟಕದ ಅಧ್ಯಕ್ಷ ಎನ್. ಉದಯಶಂಕರ್, ಮಧುರೆ ಹೋಬಳಿ ಘಟಕದ ಅಧ್ಯಕ್ಷ ವೆಂಕಟೇಶ್, ಸಮುದಾಯದ ಮುಖಂಡರಾದ ಹಣಬೆ ನಾಗರಾಜ್, ವಿಜಯ್ಕುಮಾರ್, ಗಂಗಾಧರ್, ಗಂಗಣ್ಣ, ನರಸಿಂಹಮೂರ್ತಿ, ಮುನಿಯಪ್ಪ, ಮುನಿಕೃಷ್ಣಪ್ಪ, ಸೌಮ್ಯ, ಕಮಲಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.