ADVERTISEMENT

ರಿಯಾಯಿತಿ ದರದಲ್ಲಿ ಪಶು ಆಹಾರ ಮಾರಾಟ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 2:29 IST
Last Updated 23 ಡಿಸೆಂಬರ್ 2020, 2:29 IST
ಟಿಎಪಿಸಿಎಂಎಸ್‌ನ ವಾರ್ಷಿಕ ಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
ಟಿಎಪಿಸಿಎಂಎಸ್‌ನ ವಾರ್ಷಿಕ ಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು   

ದೊಡ್ಡಬಳ್ಳಾಪುರ: ‘ರೈತರಿಗೆ ಕಡಿಮೆ ದರದಲ್ಲಿ ಪಶು ಆಹಾರ ದೊರೆಯುವಂತೆ ಮಾಡುವ ಸಲುವಾಗಿ ಬಮೂಲ್‌ ಸಹಕಾರದೊಂದಿಗೆ ಮಾರಾಟ ಮಳಿಗೆ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ’ ಎಂದು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಡಿ. ಸಿದ್ದರಾಮಯ್ಯ ಹೇಳಿದರು.

ಅವರು ನಗರದಲ್ಲಿ ಮಂಗಳವಾರ ನಡೆದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2019-20ನೇ ಸಾಲಿನ ಸರ್ವ ಸದಸ್ಯರ ಮಾಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಟಿಎಪಿಸಿಎಂಎಸ್ ರೈತರಿಗೆ ಉತ್ತಮ ಸೇವೆ ಸಲ್ಲಿಸುವ ಸಲುವಾಗಿ ರಿಯಾಯಿತಿ ದರದಲ್ಲಿ ಬೂಸ, ಹಿಂಡಿ ಮಾರಾಟ ಮಾಡಲಾಗುವುದು. ಈಗಾಗಲೇ ಸಂಘದಿಂದ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ ಬಿತ್ತನೆಬೀಜಗಳನ್ನು ಸಹ ಮಾರಾಟ ಮಾಡಲಾಗುವುದು. ಲಾಕ್‌ಡೌನ್‌ ಸಂಕಷ್ಟದ ಸಂದರ್ಭದಲ್ಲೂ ಸಂಘ ₹ ₹25 ಲಕ್ಷ ನಿವ್ವಳ ಲಾಭಗಳಿಸಿದೆ ಎಂದರು.

ADVERTISEMENT

ಸಂಘದ ನಿರ್ದೇಶಕ ಟಿ.ವಿ. ಲಕ್ಷ್ಮೀನಾರಾಯಣ್‌ ಮಾತನಾಡಿ, ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮತದಾನದ ಸಂದರ್ಭದಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತಿವೆ. ಇದನ್ನು ತಪ್ಪಿಸಲು ವಲಯವಾರು ನಿರ್ದೇಶಕ ಸ್ಥಾನಗಳನ್ನು ಮಾಡುವ ಮೂಲಕ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಈ ಬಗ್ಗೆ ಈಗಾಗಲೇ ಆಡಳಿತ ಮಂಡಳಿಯಲ್ಲಿ ಚರ್ಚೆ ನಡೆದಿದ್ದು ಸರ್ವ ಸದಸ್ಯರು ಒಪ್ಪಿಗೆ ನೀಡಬೇಕಿದೆ ಎಂದರು.

ಜೆಡಿಎಸ್‌ ತಾಲ್ಲೂಕು ಕಾರ್ಯಾಧ್ಯಕ್ಷ ಆರ್‌. ಕೆಂಪರಾಜ್‌ ಮಾತನಾಡಿ, ಒಂದೂವರೆ ತಿಂಗಳ ಹಿಂದೆ ಸಂಘಕ್ಕೆ ನಡೆದ ಚುನಾವಣೆಯಲ್ಲಿ 2,000ಕ್ಕೂ ಹೆಚ್ಚಿನ ಸದಸ್ಯರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದರು. ಸಹಕಾರ ನಿಯಮಗಳ ಪ್ರಕಾರ ಸದಸ್ಯರು ಕನಿಷ್ಠ ಮೂರು ಸರ್ವ ಸದಸ್ಯರ ಸಭೆಗಳಿಗೆ ಹಾಜರಾಗಿ ಸಹಿ ಮಾಡಬೇಕು ಎನ್ನುವ ನಿಯಮ ಇದೆ. ಕಳೆದ ಬಾರಿ ಹಲವಾರು ಜನ ಸಭೆಗೆ ಹಾಜರಾಗಿ ಸಹಿ ಮಾಡಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ಕೈಬಿಡಲಾಗಿದೆ. ಇದೊಂದು ಅವೈಜ್ಞಾನಿಕ ಕ್ರಮವಾಗಿದೆ. ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದರು.

ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಭೆಯಲ್ಲಿ ಭಾಗವಹಿಸಲು ಅವಕಾಶ ದೊರೆತಿಲ್ಲ. ಹೀಗಾಗಿ ಡಿ. 30ರವರೆಗೂ ಸದಸ್ಯರು ಸಂಘದ ಕಚೇರಿಗೆ ಭೇಟಿ ನೀಡಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇಕಡ 80ಕ್ಕೂ ಹೆಚ್ಚು ಅಂಕ ಪಡೆದ ಟಿಎಪಿಸಿಎಂಎಸ್ ಸಂಘದ ಸದಸ್ಯರ ಮಕ್ಕಳಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಂಘದ ಉಪಾಧ್ಯಕ್ಷೆ ಚಂದ್ರಕಲಾ ಮಂಜುನಾಥ್, ನಿರ್ದೇಶಕರಾದ ಎಂ. ಗೋವಿಂದರಾಜು, ಎನ್. ರಂಗಪ್ಪ, ಎಸ್‌. ದಯಾನಂದ್, ವಿ. ಅಂಜನೇಗೌಡ, ಕೆ.ಸಿ. ಲಕ್ಷ್ಮಿನಾರಾಯಣ, ಎಂ. ವೆಂಕಟೇಶ್‌, ಕೊನಘಟ್ಟ ಆನಂದ್, ಸಿದ್ದರಾಮಣ್ಣ, ಲಕ್ಷ್ಮೀ ನಾಗೇಶ್‌, ಕೆಎಂಎಫ್‌ ನಿರ್ದೇಶಕ ಬಿ.ಸಿ. ಆನಂದ್‌ಕುಮಾರ್‌, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚುಂಚೇಗೌಡ, ಕಾರ್ಯದರ್ಶಿ ಆನಂದರಾಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.