ವಿಜಯಪುರ(ದೇವನಹಳ್ಳಿ): ನಾಡಕಚೇರಿಯಲ್ಲಿ ಉಂಟಾಗಿರುವ ಸರ್ವರ್ ಸಮಸ್ಯೆಯಿಂದಾಗಿ ಕಂದಾಯ ಇಲಾಖೆ ವ್ಯಾಪ್ತಿಯ ಕೆಲಸಗಳು ಸಕಾಲದಲ್ಲಿ ಆಗದೆ ಜನರು ಅಲೆಯುವಂತಾಗಿದೆ.
ರಾಜ್ಯ ಸರ್ಕಾರ ಕಂದಾಯ ಇಲಾಖೆ ಸೇವೆಗಳನ್ನು ಪಾರದರ್ಶಕವಾಗಿ, ನಿಗದಿತ ಸಮಯದಲ್ಲಿ ಅಗತ್ಯ ದಾಖಲಾತಿ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವೈಡ್ ಏರಿಯಾ ನೆಟ್ವರ್ಕ್ (KSWAN) ಮತ್ತು ಸರ್ವರ್ಗಳ ಎಲ್ಲಾ ಅರ್ಜಿಗಳನ್ನು ಡಿಜಿಟಲೀಕರಣ ಮಾಡಿದೆ. ಇ-ಆಫೀಸ್ ಮೂಲವೇ ಇಲಾಖೆಯ ಅಧಿಕಾರಿಗಳು ಕೆಲಸ ಮಾಡುವಂತೆ ಸೂಚಿಸಿದೆ. ಆದರೆ, ಹೋಬಳಿಗೆ ಸಂಬಂಧಿಸಿದ ನಾಡಕಚೇರಿಯಲ್ಲಿ ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆಯಿಂದ ಜನರು ದಿನಪೂರ್ತಿ ಕಾಯಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾದರೂ ಕೆಲಸ ಆಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಸರ್ವರ್ ಇಲ್ಲ ಎನ್ನುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳು ಆಗಬೇಕಾದರೆ ಎಲ್ಲವೂ ಗಣಕೀರಣದ ಮೂಲಕವೇ ಆಗಬೇಕು. ಆಧಾರ್ ಕಾರ್ಡ್ ಸೀಡಿಂಗ್, ಇ-ಆಫೀಸ್, ಲ್ಯಾಂಡ್ ಬೀಟ್, ವೃದ್ಧರ ಪಿಂಚಣಿ, ಜಾತಿ, ಆದಾಯ ಪ್ರಮಾಣಪತ್ರ, ವಂಶವೃಕ್ಷ ಬಹುತೇಕ ಎಲ್ಲಾ ಸೇವೆ ನೆಟ್ವರ್ಕ್ ಮೂಲಕ ಮಾಡಬೇಕು.
ಆಯಾ ದಿನದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಆಯಾ ದಿನದಲ್ಲೆ ವಿಲೇವಾರಿ ಮಾಡಿ ಮುಂದಿನ ಹಂತಕ್ಕೆ ಕಳುಹಿಸಿಕೊಡಬೇಕು. ಆದರೆ, ಇಲ್ಲಿ ನೆಟ್ವರ್ಕ್ ಮತ್ತು ಸರ್ವರ್ ಇಲ್ಲದೆ ದಿನಕ್ಕೆ ನೂರಾರು ಅರ್ಜಿಗಳಲ್ಲಿ ಕೇವಲ 20 ಅರ್ಜಿ ಮಾತ್ರ ವಿಲೇವಾರಿ ಮಾಡಲು ಆಗುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ವಂಶವೃಕ್ಷ ಮಾಡಿಸಲು ಅರ್ಜಿ ಸಲ್ಲಿಸಿ ಸಲು ಮೂರು ದಿನ ಬಂದು ನೆಟ್ವರ್ಕ್ ಸಮಸ್ಯೆಯಿಂದ ವಾಪಸ್ ಹೋಗಿದ್ದೆ ಇಂದು ಬೆಳಗ್ಗೆ 10 ಗಂಟೆಗೆ ಬಂದು ಮಧ್ಯಾಹ್ನ 1 ಗಂಟೆಗೆ ಅರ್ಜಿ ಸಲ್ಲಿಸಿದ್ದೇನೆ.ನಾರಾಯಣಸ್ವಾಮಪ್ಪ ಸ್ಥಳೀಯ
ಹೋಬಳಿಯ ನಾಡಕಚೇರಿಯಲ್ಲಿ ಕೆಸ್ವಾನ್ ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆ ಬಗ್ಗೆ ಅಲ್ಲಿನ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದೇನೆ. ಶೀಘ್ರವಾಗಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.ಎಚ್.ಬಾಲಕೃಷ್ಣ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.