ದೊಡ್ಡಬಳ್ಳಾಪುರದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆಯಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿದರು
ದೊಡ್ಡಬಳ್ಳಾಪುರ: ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರು ಇನ್ನೂ ಶೋಷಿತ ಜನರ ಬದುಕು ಹಸನಾಗಿಲ್ಲ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗ,ಅಲ್ಪಸಂಖ್ಯಾತರಿಗೆ ಸಮಾನತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೆ ಇರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ನಿರ್ದೇಶನ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
‘ದೇಶದಲ್ಲಿ ಬಡತನ, ಅಸಮಾನತೆ, ಅನಕ್ಷರತೆ, ನಿರುದ್ಯೋಗ ತಾಂಡವಾಡುತ್ತಿದ್ದರು ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಮತಕ್ಕಾಗಿ ಜನಸಾಮಾನ್ಯರನ್ನು ಬೆರಗು ಮಾಡಿ ಮತ ಪಡೆದ ನಂತರ ಅವರ ಕಷ್ಟಗಳೇನು ಎಂಬುದು ತಿಳಿಯದೆ ನಮ್ಮನ್ನು ತಮ್ಮ ಗುಲಾಮರಾಗಿ ಮಾಡಿಕೊಂಡಿದ್ದಾರೆ’ ಎಂದು ದೂರಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ದಲಿತರು ಹಿಂದುಳಿದ ವರ್ಗದವರನ್ನು ಯುದ್ಧ ಸಮಯದಲ್ಲಿ ಬಳಿಸಿಕೊಂಡು ನಂತರ ಅವರಿಗೆ ಭೂಮಿ, ವಿದ್ಯೆ, ಸರ್ಕಾರಿ ಉದ್ಯೋಗ, ಮೂಲ ಸೌಕರ್ಯ ನೀಡದೇ ವಂಚಿಸಿದ್ದಾರೆ. ಅಂಬೇಡ್ಕರ್ ಅವರ ಹೋರಾಟದ ಮೂಲಕ ಸಂವಿಧಾನ ನೀಡಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ನೀಡಿದ್ದಾರೆ. ಆದರೆ ಸಂವಿಧಾನದ ಆಶಯಗಳು ಈಡೇರುತ್ತಿಲ್ಲ ಎಂದರು.
ಆಲ್ ಇಂಡಿಯ ಬಹುಜನ ಸಮಾಜ ಪಾರ್ಟಿ ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ, ‘ಕಾಂಗ್ರೆಸ್ ಮತ್ತು ಬಿಜೆಪಿ ಜಾತಿಪದ್ಧತಿ, ಬಡತನ, ಅಸಮಾನತೆ, ನಿರುದ್ಯೋಗ, ದೌರ್ಜನ್ಯಗಳನ್ನು ಶಾಶ್ವತವಾಗಿ ಇರಿಸಲು ಪ್ರಯತ್ನಿಸುತ್ತವೆ. ಇದನ್ನು ನಾವು ಅರಿಯಬೇಕಿದ್ದು, ರಾಜ್ಯದಲ್ಲಿ ಉದಯಿಸಿರುವ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯನ್ನು ಕಟ್ಟಿ ಬೆಳಸಬೇಕು’ ಎಂದರು.
ಮನೆ ಮನೆಗೆ ಬಾಬಾಸಾಹೇಬರ, ಕಾನ್ಸಿರಾಮ್, ಮಹಾತ್ಮ ಜ್ಯೋತಿಬಾ ಪುಲೆ, ಛತ್ರಪತಿ ಶಾಹು ಮಹಾರಾಜ, ನಾರಾಯಣಗುರು, ಪೆರಿಯಾರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಪ್ರೊ.ಬಿ.ಕೃಷ್ಣಪ್ಪ ಅವರ ಸಂದೇಶವನ್ನು ಮುಟ್ಟಿಸಬೇಕು ಎಂದರು.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಸಂಚಾಲಕ ಬಸವರಾಜು, ರಾಜ್ಯ ಪ್ರದಾನ ಕಾರ್ಯದರ್ಶಿ ನಂದಿಗುಂದ ಪಿ ವೆಂಕಟೇಶ. ಜಿಲ್ಲಾ ಅಧ್ಯಕ್ಷ ಮಹದೇವ, ರಾಜ್ಯ ಸಂಯೋಜಕ ಆರ್.ಮುನಿಯಪ್ಪ, ರಾಜ್ಯ ಕಾರ್ಯದರ್ಶಿ ರಮಾದೇವಿ,ತಾಲ್ಲೂಕು ಅಧ್ಯಕ್ಷ ನಂಜೇಶ್,ಉಪಾಧ್ಯಕ್ಷ ಮುನೀಂದ್ರ ಕುಮಾರ್,ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎನ್.ಎಂ. ದಾಳಪ್ಪ, ಜಿಲ್ಲಾ ನಗರ ಗ್ರಾಮಾಂತರ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.