ADVERTISEMENT

ದೊಡ್ಡಬಳ್ಳಾಪುರ: ಸ್ಟೆಮ್.ಎಐ ಪ್ರಯೋಗಾಲಯ ಅಸ್ತಿತ್ವಕ್ಕೆ

ಕಂಟನಗುಂಟೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಅರಿವಿಗೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 2:14 IST
Last Updated 25 ಫೆಬ್ರುವರಿ 2026, 2:14 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಟನಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಟೆಮ್.ಎಐ ಪ್ರಯೋಗಾಲಯ ನಿರ್ಮಿಸಿಕೊಟ್ಟ ದಾನಿಗಳು 
ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಟನಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಟೆಮ್.ಎಐ ಪ್ರಯೋಗಾಲಯ ನಿರ್ಮಿಸಿಕೊಟ್ಟ ದಾನಿಗಳು    

ಪ್ರಜಾವಾಣಿ ವಾರ್ತೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಕಂಟನಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಅರಿವು ಬೆಳೆಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಸ್ಟೆಮ್.ಎಐ ಪ್ರಯೋಗಾಲಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. 

ಬೆಂಗಳೂರಿನ ಚೆರಿಷ್ ಟ್ರಸ್ಟ್ ಸಂಸ್ಥಾಪಕ ಮೈಖಲ್ ದೇಸಾ ಮಾತನಾಡಿ, ‘ಜಾಗತಿಕ ಸವಾಲುಗಳಿಗೆ ಗ್ರಾಮೀಣ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ದಿಸೆಯಲ್ಲಿ ಗ್ರಾಮೀಣ ಮಕ್ಕಳಿಗೆ ತಂತ್ರಜ್ಞಾನಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ’ ಎಂದು ಹೇಳಿದರು. 

ADVERTISEMENT

ಸ್ಟೆಮ್ ಮತ್ತು ಎಐ ಆಧಾರಿತ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹಾರ ಕೌಶಲ್ಯ, ಸೃಜನಶೀಲತೆ ಹಾಗೂ ಭವಿಷ್ಯದ ತಂತ್ರಜ್ಞಾನಾಧಾರಿತ ಉದ್ಯೋಗಗಳಿಗೆ ಅಗತ್ಯ ಸಾಮರ್ಥ್ಯಗಳನ್ನು ಬೆಳೆಸುತ್ತದೆ. ಶಿಕ್ಷಣ ಮತ್ತು ಕಾರ್ಯಪಡೆ ಅಭಿವೃದ್ಧಿಗೆ ಅಂತರಶಿಸ್ತೀಯ ವಿಧಾನ ಪ್ರತಿನಿಧಿಸುವ ಸ್ಟೆಮ್‌ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಮತ್ತು ಎ.ಐ(ಕೃತಕ ಬುದ್ಧಿಮತ್ತೆ) ಇಂದು ನಾವೀನ್ಯತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳ ಪರಿಹಾರದ ಮೇಲೆ ಕೇಂದ್ರೀಕೃತವಾಗಿದೆ. ಇದು ತಾಂತ್ರಿಕ ವೃತ್ತಿಜೀವನಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು, ಜಾಗತಿಕ, ಆರ್ಥಿಕ, ಸ್ಪರ್ಧಾತ್ಮಕತೆಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದರು.

ಸಿ.ಎಸ್.ಆರ್ ಮುಖ್ಯಸ್ಥೆ ಸಮೀತಾ ಮನೋಹರನ್ ಮಾತನಾಡಿ, ಸ್ಟೆಮ್.ಎಐ ಪ್ರಯೋಗಾಲಯಗಳನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಟನಕುಂಟೆ, ಚಿಕ್ಕಹೆಜ್ಜಾಜಿ, ಆರೂಢಿ ಹಾಗೂ ಮೆಳೇಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎ.ಎನ್.ಎಸ್.ಆರ್ ಫೌಂಡೇಶನ್ ಬೆಂಬಲದೊಂದಿಗೆ ಸ್ಥಾಪಿಸಲ್ಪಟ್ಟಿವೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಮೂಲ ಕೋಡಿಂಗ್, ಎಐ ಪರಿಚಯ, ವಿನ್ಯಾಸ ಚಿಂತನೆ ಹಾಗೂ ವಿಜ್ಞಾನ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕೈಚಳಕದ ಕಲಿಕೆ ಅವಕಾಶ ಒದಗಿಸಲಿವೆ ಎಂದರು.

ಕಾರ್ಯಕ್ರಮದಲ್ಲಿ ಚೆರಿಷ್ ಟ್ರಸ್ಟ್‌ ಅಧ್ಯಕ್ಷ ಸಂಜೀವ್ ಷಣ್ಮುಗಂ, ಟ್ರಸ್ಟಿ ಅನಿತಾ ಸಿಂಗ್, ಡಾ.ಕ್ಯಾರೋಲಿನ್ ಕ್ಯಾಮರನ್, ಶಾಲೆ ಮಖ್ಯ ಶಿಕ್ಷಕಿ ಮಂಜುಳಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ರಾಜಶೇಖರ್, ಕಾರ್ಯದರ್ಶಿ ವಿ.ಧನಂಜಯ, ಶಿಕ್ಷಣ ಸಂಯೋಜಕ ಆಂಜಿನಪ್ಪ, ಮಧು, ರಾಮಚಂದ್ರ, ಸಿ.ಆರ್.ಪಿ ವೆಂಕಟೇಶಮೂರ್ತಿ ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿ ಎ.ವಿ.ಚಂದ್ರಪ್ಪ, ಜೈ ಕುಮಾರ್, ಸಿದ್ದಗಂಗಯ್ಯ, ಎಂ.ಜಿ. ಶ್ರೀನಿವಾಸ್, ಚೆರಿಷ್ ತಂಡದ ಸುರೇಶ್, ಆತ್ಮಜ, ಸ್ಫೂರ್ತಿ, ಕೃತಿಕ್, ಶಾಂತ, ಎಎನ್ಎಸ್ಆರ್ ಫೌಂಡೇಶನ್‌ ಗ್ಯಾನ್ಪ್ರೊ ತಂಡದ ಡಾ.ಸುಪ್ರೀತ್ ಕಿತ್ತನಕೆರೆ, ಕೃತಿಕಾ, ಅಶೋಕ್, ಭೀಮರಾವ್ ವಿ ಕುಲಕರ್ಣಿ, ವಾಸುಕಿ ಶೆನೋಯ್, ವಿಕಾಸ್ ತಿವಾರಿ, ಶಿಕ್ಷಕ ಮಲ್ಲಿಕಾರ್ಜುನರೆಡ್ಡಿ, ಆಂಜಿನಪ್ಪ ಇದ್ದರು.

ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿಜ್ಞಾನ ಪ್ರಯೋಗಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಟನಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಟೆಮ್.ಎಐ ಪ್ರಯೋಗಾಲಯವನ್ನು ಬೆಂಗಳೂರಿನ ಚೆರಿಷ್ ಟ್ರಸ್ಟ್ ಸಂಸ್ಥಾಪಕ  ಮೈಖಲ್ ದೇಸಾ ಉದ್ಘಾಟಿಸಿದರು. ಸಿ.ಎಸ್.ಆರ್ ಮುಖ್ಯಸ್ಥೆ ಸಮೀತಾ ಮನೋಹರನ್ ಇದ್ದರು  

Cut-off box - ಸಂಶೋಧನೆಗೆ ಹೆಚ್ಚಿನ ಮಹತ್ವ ಇಂದಿನ ತಂತ್ರಜ್ಞಾನ ಯುಗದಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಹೀಗಾಗಿ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಹೊಸ ಆವಿಷ್ಕಾರಗಳನ್ನು ಮಾಡಬೇಕು. ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆರ್.ನಾರಾಯಣಸ್ವಾಮಿ ತಿಳಿಸಿದರು.  ಇಂತಹ ಪ್ರಯೋಗಾಲಯಗಳು ಗ್ರಾಮೀಣ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆಗೆ ದಾರಿಯಾಗಲಿದ್ದು ಪ್ರಯೋಗಾಲಯಗಳ ಸದುಪಯೋಗ ಮಾಡಿಕೊಳ್ಳಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.