ದೇವನಹಳ್ಳಿ: ವಿವಿಧ ಕಲಾ ಪ್ರಕಾರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶವಿದೆ ಎಂದು ಪ್ರಾಂಶುಪಾಲೆ ಪಿ.ನಾಗರತ್ನ ಹೇಳಿದರು.
ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ, ಕಲೋತ್ಸವ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುವ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವ ವಿದ್ಯಾರ್ಥಿಗಳಲ್ಲಿ ಯಾವ್ಯಾವ ರೀತಿಯ ಪ್ರತಿಭೆಗಳಿರುತ್ತವೆ ಎಂಬುದು ವೇದಿಕೆ ಮತ್ತು ಅವಕಾಶ ನೀಡಿದಾಗ ಮಾತ್ರ ಗೊತ್ತಾಗಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿ ವಿಭಿನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಗುಣಮಟ್ಟದ ಫಲಿತಾಂಶ ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಅಟಲ್ ಬಿಹಾರಿ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಅತಿ ಹೆಚ್ಚು ಗ್ರಾಮೀಣ ಪ್ರದೇಶದವರಾಗಿರುವುದರಿಂದ ಸ್ಥಳೀಯ ಸಾಂಸ್ಕೃತಿಕ ಕಲೆಗಳ ಅರಿವಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಹೆಚ್ಚಿಸಿ, ಪೂರಕವಾಗಿ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು ಎಂದರು.
ವಸತಿ ಶಾಲೆ ಸ್ಥಳಾಂತರಗೊಂಡು ಎರಡು ವರ್ಷಗಳಾಗಿವೆ, ಶೈಕ್ಷಣಿಕ ಪೂರಕ ವಾತಾವರಣ ಉತ್ತಮವಾಗಿದೆ. ವಿಷಯವಾರು ಶಿಕ್ಷಕರ ಕೊರತೆಯು ಇಲ್ಲ, ವಿದ್ಯಾರ್ಥಿಗಳು ಮತ್ತಷ್ಟು ಆಸಕ್ತಿ ವಹಿಸಿ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ಶಾಲೆಗೆ ಮತ್ತು ಪೊಷಕರಿಗೆ ಕೀರ್ತಿ ತರಲಿ ಎಂದು ಹೇಳಿದರು.
ಸಂಗೀತ ಶಿಕ್ಷಕಿ ಎಸ್.ಪೂರ್ಣಿಮಾ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ್ದು, ಮಕ್ಕಳ ಕಲಿಕೆಯಲ್ಲಿ ಪ್ರತಿಯೊಂದು ಕ್ಷೇತ್ರದ ಸಕಾರಾತ್ಮಕ ವಿಷಯಗಳ ಅರಿವು ಇರಬೇಕು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ವಾರ್ಷಿಕ ಪ್ರತಿಭಾ ಕಾರಂಜಿ, ಕಲೋತ್ಸವ ಯೋಜನೆಯನ್ನು ಜಾರಿಮಾಡಿ ಶಾಲಾ ಹಂತ, ಕ್ಲಸ್ಟರ್, ಹೋಬಳಿ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ 38 ವಿವಿಧ ಪಠ್ಯೇತರ ಚಟುವಟಿಕೆ ಸ್ಪರ್ಧೆಗೆ ವೇದಿಕೆ ಕಲ್ಪಿಸಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಹ ಶಿಕ್ಷಕರಾದ ವಿದ್ಯಾರಾಣಿ, ಮುತ್ತುಬಾಯಿ, ಆರ್.ರೂಪ, ಎಚ್. ರೇಖಾ, ಜೀನತ್ ಸಾಜೀದಾ, ಗಿರೀಶ್ ನಾಯಕ, ಮಂಜುನಾಥ್, ಕೇಶವ ಇದ್ದರು.
ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡವರು:ಕಲೋತ್ಸವ ಸಂಗೀತಾ ಸಮೂಹಗಾಯನ ಸ್ಪರ್ಧೆ ಪ್ರಥಮ: ನಯನ, ಸಂಧ್ಯಾ, ಶಿರೀಷಾ, ವರ್ಷಿತಾ, ಹೇಮಾವತಿ, ಹೇಮಂತ್ ಕುಮಾರ್, ಚೇತನ್ ಕುಮಾರ್, ಅಪೂರ್ವ
ಭಾವಗೀತೆ: ನಯನ ಪ್ರಥಮ, ಶಿರೀಷಾ ದ್ವಿತೀಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.